ಕೈಕೊಟ್ಟ ಕ್ರೆಸ್ಟ್ ಗೇಟ್: ಮಾರ್ಕೋನಹಳ್ಳಿ ಕೆರೆ ಏರಿಗೆ ಹಾನಿ
ತುಮಕೂರು:ಸಮೀಪದ ಕುಣಿಗಲ್ನ ಹತ್ತಿರವಿರುವ ಮಾರ್ಕೋನಹಳ್ಳಿ ಜಲಾಶಯದ ಕ್ರೆಸ್ಟ್ಗೇಟ್ಗಳನ್ನು ತೆರೆಯಲು ಸಾಧ್ಯವಾಗದೆ ಸುಮಾರು 200 ಮೀಟರ್ ಏರಿಯನ್ನು ಒಡೆದು ನೀರನ್ನು ಹೊರಬಿಡಲಾಗುತ್ತಿದೆ.
ತಿಪಟೂರು ಮತ್ತು ತುರುವೇಕೆರೆ ಪ್ರದೇಶಗಳಲ್ಲಿ ಸತತ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದ ಸಾಮರ್ಥ್ಯ 88 ಅಡಿಗಳಾಗಿದ್ದು, ಈಗಾಗಲೇ 90.7 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಗೇಟ್ಗಳನ್ನು ತೆರೆಯಲು ನಡೆಸಿರುವ ಎಲ್ಲ ಪ್ರಯತ್ನಗಳೂ ವಿಫಲವಾಗಿರುವುದರಿಂದ ಏರಿ ಒಡೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಬಾಬು ಪುಟಾಣೆ ಹೇಳಿದ್ದಾರೆ.
ಜಲಾಶಯಕ್ಕೆ ಅಳವಡಿಸಿರುವ 5 ಕ್ರೆಸ್ಟ್ ಗೇಟ್ಗಳ ಪೈಕಿ 4 ಕೆಲಸ ಮಾಡುತ್ತಿಲ್ಲ. ಉಳಿದ ಒಂದು ಗೇಟನ್ನು ಸಾರ್ವಜನಿಕರ ಸತತ ಪ್ರಯತ್ನದಿಂದ ಕಾಲುಭಾಗದಷ್ಟು ಮೇಲೆತ್ತಲು ಸಾಧ್ಯವಾಗಿದೆ. ಈಗ 200 ಅಡಿಗಳಷ್ಟು ಏರಿ ಒಡೆದಿರುವುದರಿಂದ ಸುಮಾರು 60 ಸಾವಿರ ಕ್ಯಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಸತತ ಮಳೆ ಪರಿಣಾಮವಾಗಿ ನೀರಿನ ಒಳ ಹರಿವಿನ ಪ್ರಮಾಣ ಇನ್ನೂ ಹೆಚ್ಚಾಗಬಹುದೆಂದು ಹೇಳಲಾಗಿದೆ.
ಮುಂದುವರಿದ ಯತ್ನಗಳು: ಈ ಮಧ್ಯೆ ಕೃಷ್ಣರಾಜಸಾಗರದ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಮಸ್ವಾಮಿ ರೆಡ್ಡಿ ತಮ್ಮ ಸಿಬ್ಬಂದಿಯಾಂದಿಗೆ ಬಂದು ಗೇಟ್ಗಳನ್ನು ತೆರೆಯುವ ಪ್ರಯತ್ನ ನಡೆಸಿದ್ದಾರೆ. ನೀರನ್ನು ಶಿಂಷಾ ಜಲಾಶಯಕ್ಕೆ ಬಿಡಲಾಗುತ್ತಿದ್ದು, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಆದ್ದರಿಂದ ಸಾರ್ವಜನಿಕರು ಆತಂಕ ಪಡಬೇಕಾದ ಯಾವುದೇ ಪರಿಸ್ಥಿತಿ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 50 ವರ್ಷಗಳಷ್ಟು ಹಳೆಯದಾದ ಗೇಟುಗಳ ದುರಸ್ತಿ ಕೈಗೊಳ್ಳದಿರುವುದರಿಂದ ಇಂಥ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಣಿಗಲ್ ಶಾಸಕ ವೈ.ಕೆ. ರಾಮಯ್ಯ ಹೇಳಿದ್ದಾರೆ. ಗೇಟ್ಗಳನ್ನು ಬದಲಿಸಲು ರಾಜ್ಯ ಸರಕಾರ ಒಂದು ಕೋಟಿ ರುಪಾಯಿಯನ್ನು ಬಿಟುಗಡೆ ಮಾಡಿದೆ. ಗುತ್ತಿಗೆದಾರರ ನೇಮಕವಾಗಿದ್ದು, ಕೆಲಸ ಪ್ರಾರಂಭವಾಗಬೇಕಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಆರ್. ಜಯರಾಮರಾಜ ಅರಸ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.
(ಇನ್ಫೋ ವರದಿ)