ನಿಮಗೆ ಮನೆ ಇಲ್ಲವೆ ? ಕೃಷ್ಣ ಕಟ್ಟಿಕೊಡುತ್ತಾರೆ ತಾಳಿ
ಬೆಂಗಳೂರು : ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ 11 ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿರುವುದಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬುಧವಾರ ತಿಳಿಸಿದ್ದಾರೆ. ಈ ಯೋಜನೆ ಯಶಸ್ವಿಯಾದಲ್ಲಿ ರಾಜ್ಯದ ಸರ್ವರಿಗೂ ವಸತಿ ಕಲ್ಪಿಸಿದ ಭಾರತದ ಏಕಮಾತ್ರ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಲಿದೆ.
100 ವಸತಿ ಯೋಜನೆಗಳು- 2000 : 1991ರ ಜನಗಣತಿ ಪ್ರಕಾರ, ರಾಜ್ಯದಲ್ಲಿ ಸೂರಿಲ್ಲದ 11 ಲಕ್ಷ ಜನರಿದ್ದರು. ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಕಾಲದಲ್ಲಿ ಈ ಸಮಸ್ಯೆಯನ್ನು ಸಂಪೂರ್ಣ ಹೊಡೆದೋಡಿಸಲು ನಿರ್ಧರಿಸಿದೆ ಎಂದು 850 ಕೋಟಿ ರುಪಾಯಿ ವೆಚ್ಚದ ‘100 ವಸತಿ ಯೋಜನೆಗಳು- 2000’ ಯೋಜ-ನೆ-ಯನ್ನು ಘೋಷಿಸಿದ ಸಂದರ್ಭದಲ್ಲಿ ಹೇಳಿದರು. ಪ್ರಸ್ತುತ ವಿತ್ತ ವರ್ಷದ ಮೊದಲ 6 ತಿಂಗಳಲ್ಲಿ ಆರ್ಥಿಕ ಇಲಾಖೆ ವಿವಿಧ ವಸತಿ ಯೋಜನೆಗಳಿಗೆ 54 ಕೋಟಿ ರುಪಾಯಿ ದಾಖಲೆ ಸಹಾಯಧನ ನೀಡಿದೆ ಎಂದರು.
ಇನ್ನೆರಡು ವರ್ಷಗಳಲ್ಲಿ ಎಲ್ಲೆಡೆ ಜಾರಿ : ಯೋಜನೆಯನ್ನು ಕರ್ನಾಟಕ ವಸತಿ -ಮಂ-ಡ-ಳಿ-ಯು ಕೈಗೆತ್ತಿಕೊಂಡಿದ್ದು, ಹುಡ್ಕೋ ಧನ ಸಹಾಯ ಮಾಡಲಿದೆ. ಇನ್ನು 24 ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯೋಜನೆ ಜಾರಿಗೆ ಬರಲಿದ್ದು, 13 ಸಾವಿರದ 500 ಮನೆಗಳನ್ನು ನಿರ್ಮಿಸಲಾಗುವುದು ಮತ್ತು 15 ಸಾವಿರ ನಿವೇಶನಗಳನ್ನು ಒದಗಿಸಲಾಗುವುದು. ಚುನಾಯಿತ ಪ್ರತಿನಿಧಿಗಳು ಜಂಬೂ ಸವಾರಿ ವೇಗದಲ್ಲಿ ಕಾರ್ಯ ಮಾಡುವುದು ಸಲ್ಲ. ಸ್ಪೀಡ್ ಆಗಿರಬೇಕು. ತ್ವರಿತ ಗತಿಯಲ್ಲಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ಹೇಳಿದ್ದೇನೆ ಎಂದು ಕೃಷ್ಣ ತಿಳಿಸಿದರು.
ವಸತಿ ಮಂಡಳಿಯ ಹೊಸ ವೆಬ್ಸೈಟ್ : ಹುಡ್ಕೋ ಅಧ್ಯಕ್ಷ ವಿ.ಸುರೇಶ್ ಮತ್ತು ಕರ್ನಾಟಕ ವಸತಿ ಮಂಡಳಿ ಆಯುಕ್ತ ಅರವಿಂದ್ ಜಾದವ್ ಯೋಜನೆಯ ಒಡಂಬಡಿಕೆ ಕುರಿತ ಒಪ್ಪಂದಕ್ಕೆ ಸಹಿ ಹಾಕಿದರು. ಯೋಜನೆಯನ್ನು ಪಾರದರ್ಶಕವಾಗಿಸುವ ಉದ್ದೇಶದಿಂದ ಸುರೇಶ್, ವಸತಿ ಮಂಡಳಿಯ ವೆಬ್ಸೈಟ್ www.karnatakahousing.com ಉದ್ಘಾಟಿಸಿದರು. ಯೋಜನೆ ನೆರವನ್ನು ಹುಡ್ಕೋ 730 ಕೋಟಿ ರುಪಾಯಿಗಳಷ್ಟು ಹೆಚ್ಚಿಸಲಿದ್ದು, ಹೊಸದಾಗಿ ರೂಪಿಸಲಾಗಿರುವ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೂ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ಕೊಟ್ಟರು.
ಜನರೂ ಹಣ ಹಾಕಬಹುದು : ನಗರದ ಹೊರ ವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಟೌನ್ಷಿಪ್ಗಾಗಿ ವಸತಿ ಮಂಡಳಿಯಾಡನೆ ಹಣ ತೊಡಗಿಸುವಂತೆ ವಸತಿ ಖಾತೆ ಸಚಿವ ಖಮರುಲ್ ಇಸ್ಲಾಂ ಸಾರ್ವಜನಿಕರಿಗೆ ಕರೆ ಕೊಟ್ಟರು. ಇದು ಅಪರೂಪದ ಅವಕಾಶವಾಗಿದ್ದು, ನವೆಂಬರ್ ತಿಂಗಳಲ್ಲಿ ಪ್ರಸ್ತಾವನೆಗಳನ್ನು ಅಖೈರು ಮಾಡಲಾಗುವುದು. ಮುಂದಿನ ವರ್ಷ ಜನವರಿಯಲ್ಲಿ ಕಾಮಗಾರಿ ಪ್ರಾರಂಭವಾಗುವುದು ಎಂದರು.
ಸಾರ್ವಜನಿಕರಿಗೆ ಸಾಕಷ್ಟು ನಿವೇಶನಗಳನ್ನು ಒದಗಿಸಲು ಖಾಸಗಿಯವರೊಂದಿಗೆ ಕೈಜೋಡಿಸಲೂ ಸರ್ಕಾರ ನಿರ್ಧರಿಸಿದ್ದು, ಬೆಂಗಳೂರು, ಮಂಗಳೂರು, ದಾವಣಗೆರೆ ಮತ್ತು ಹುಬ್ಬಳ್ಳಿಗಳಲ್ಲಿ ಈಗಾಗಲೇ ಈ ಕುರಿತು ಪ್ರಸ್ತಾವನೆಗಳು ಬಂದಿವೆ ಎಂದು ಹೇಳಿದರು.
(ಯುಎನ್ಐ)