ಜೆಎಂಎಂ ಲಂಚ ಪ್ರಕರಣ : ಪಿ.ವಿ.ಎನ್ಗೆ ಜೈಲು ಶಿಕ್ಷೆ ಸಂಭವ
ನವದೆಹಲಿ : ಜಾರ್ಖಂಡ್ ಮುಕ್ತಿ ಮೋರ್ಚಾ ( ಜೆ.ಎಂ.ಎಂ) ಲಂಚ ಹಗರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಮಾಜಿ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಹಾಗೂ ಕೇಂದ್ರದ ಮಾಜಿ ಸಚಿವ ಬೂಟಾಸಿಂಗ್ ಅವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣ ಎಷ್ಟು ಎಂಬ ಬಗ್ಗೆ ಬುಧವಾರ ತೀರ್ಪು ಹೊರಬೀಳಲಿದೆ.
ಮಾಜಿ ಪ್ರಧಾನಿ ಹಾಗೂ ಮಾಜಿ ಸಚಿವರಿಗೆ ಜೈಲು ಶಿಕ್ಷೆಯಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ತಿಹಾರ್ ಜೈಲ್ ಬಿಗಿ ಬಂದೋಬಸ್ತ್ನೊಂದಿಗೆ ಸಜ್ಜಾಗಿದೆ. 79 ವರ್ಷ ವಯಸ್ಸಿನ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹಾಗೂ ಮಾಜಿ ಸಚಿವ ಬೂಟಾಸಿಂಗ್ ಅವರು ಜೆಎಂಎಂ ಬಹುಕೋಟಿ ಲಂಚ ಪ್ರಕರಣದಲ್ಲಿ ಅಪರಾಧಿಗಳೆಂದು ಸಿಬಿಐನ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 29ರ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ದೇಶದ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ವಿಧಿಸಬಹುದಾದ ಶಿಕ್ಷೆಯನ್ನು ತಪ್ಪಿಸಲು ಪಿ.ವಿ.ಎನ್. ಪರ ವಕೀಲರು ಹೆಣಗಾಡುತ್ತಿದ್ದು, ಶಿಕ್ಷೆಯ ಪ್ರಮಾಣವನ್ನಾದರೂ ಕಡಿಮೆ ಮಾಡಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ನಿಯೋಜಿತ ನ್ಯಾಯಾಲಯದ ನ್ಯಾಯಾಧೀಶರಾದ ಅಜಿತ್ ಭಾರಿಹೋಕ್ ಅವರು ಬುಧವಾರ ಆರೋಪಿಗಳಿಗೆ ಶಿಕ್ಷೆ ವಿಧಿಸಲಿದ್ದಾರೆ.
ಶಿಕ್ಷೆಯ ಅವಧಿ ಮೂರು ವರ್ಷಗಳಿಗಿಂತಲೂ ಕಡಿಮೆ ಆದಲ್ಲಿ ಪಿ.ವಿ.ನರಸಿಂಹರಾವ್ ಅವರು ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆಯಾಗಬಹುದಾಗಿದೆ ಎಂದು ಹಿರಿಯ ವಕೀಲ ಆನಂದ್ ಹೇಳಿದ್ದಾರೆ. ಅಲ್ಲದೆ, ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನೀಡುವ ತೀರ್ಪಿನ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿಯೂ ನರಸಿಂಹರಾವ್ ಪರ ವಕೀಲರು ತಿಳಿಸಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...