ಅ.15, ದೇವರಕಾಡು ಸಂರಕ್ಷಣೆಗೆ ಕೋಡಗಿನಲ್ಲಿ ವಿಚಾರಸಂಕಿರಣ
ಮಡಿಕೇರಿ : ಅರಣ್ಯ ನಾಶ ತಪ್ಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ದೇವರಕಾಡು. ದೇವರಕಾಡು ಕೊಡಗು, ಮಲೆನಾಡು ಪ್ರದೇಶಗಳ ಕಾಡುಗಳಲ್ಲಿ ಅಸ್ಥಿತ್ವದಲ್ಲಿದೆ. ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟಿಕೊಂಡು ನೂರು ವರ್ಷಗಳೇ ಕಳೆದಿವೆ.
ದೇವರಕಾಡು ಸಂರಕ್ಷಿಸುವ ಪರಿಣಾಮಕಾರಿ ನಿರ್ವಹಣೆ ಕುರಿತು ಭಾನುವಾರ ಮತ್ತು ಸೋಮವಾರ (ಅ.15 ಮತ್ತು 16) ಕೊಡಗು ಜಿಲ್ಲೆಯಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡು ಗಳ್ಳರು, ಮರಗಳ್ಳರು, ದೇವರಕಾಡನ್ನು ನಾಶಮಾಡುತ್ತಿದ್ದಾರೆ. ಉರುವಲಿಗಾಗಿ ಮರಕಡಿಯುವವರಿಂದ ಹಿಡಿದು, ಹಣದಾಸೆಗಾಗಿ ಮರಗಳ್ಳತನ ಮಾಡುವವರಿಂದ ಅರಣ್ಯನಾಶ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಉಳಿಸುವ ಕುರಿತು ಚರ್ಚಿಸಲು ಪೊನ್ನಂಪೇಟೆ ಕೃಷಿ ವಿಶ್ವವಿದ್ಯಾಲಯದ ಅರಣ್ಯ ಕಾಲೇಜು, ಭೋಪಾಲ್ನ ಇಂದಿರಾಗಾಂಧೀ ರಾಷ್ಟ್ರೀಯ ಮಾನವ್ ಸಂಗ್ರಹಾಲಯ ಮತ್ತು ಜಿಲ್ಲೆಯ ಇತರ ಪರಿಸರ ಸಂಘಟನೆಗಳು ಸಂಯುಕ್ತವಾಗಿ ಈ ವಿಚಾರ ಸಂಕಿರಣವನ್ನು ಏರ್ಪಡಿಸಿವೆ.
ಕೊಡಗು ಜಿಲ್ಲೆಯ 4104 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ 1214 ದೇವರಕಾಡುಗಳನ್ನು ಪಟ್ಟಿ ಮಾಡಲಾಗಿದೆ. ಜಗತ್ತಿನ ಯಾವುದೇ ವನಪ್ರದೇಶದಲ್ಲಿ ಇಲ್ಲದಂತಹ ದಟ್ಟ ಅರಣ್ಯ ಇಲ್ಲಿದ್ದು, ವೈವಿಧ್ಯಮಯ ಸಸ್ಯಗಳು, ಗಿಡ - ಮರಗಳು ಮಿಗಿಲಾಗಿ ಪ್ರಾಣಿ ಸಂಕುಲ ಇದೆ. ಈ ಕಾಡುಗಳ ಉಸ್ತುವಾರಿಯನ್ನು ಸ್ಥಳೀಯ ದೇವಾಲಯಗಳೇ ನೋಡಿಕೊಳ್ಳುತ್ತವೆ. ಹೀಗಾಗಿ ದೇವರಕಾಡು ಪರಿಕಲ್ಪನೆಗೆ ಹೆಚ್ಚಿನ ಮಹತ್ವ ಬಂದಿದೆ.
ಅಕ್ಟೋಬರ್ 15 ಮತ್ತು 16ರಂದು ನಡೆಯಲಿರುವ ವಿಚಾರ ಸಂಕಿರಣದಲ್ಲಿ 50 ದೇವಾಲಯಗಳ ಸಮಿತಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.