Get Updates
Get notified of breaking news, exclusive insights, and must-see stories!

ನೆನಪನ್ನು ಮೆಲುಕು ಹಾಕಿಸುವ ಮೇಲುಕೋಟೆ

melkote cheluvanarayana
ವೇರಿ ತೀರದಲ್ಲಿ ಸಮೃದ್ಧವಾಗಿ ಕಬ್ಬು ಬೆಳೆವ ಮಂಡ್ಯ ಜಿಲ್ಲೆಯಲ್ಲಿರುವ ಐತಿಹಾಸಿಕ ಪುಣ್ಯಕ್ಷೇತ್ರ ಮೇಲುಕೋಟೆ. ಹಳೇ ಮೈಸೂರು ಪ್ರಾಂತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಮೇಲುಕೋಟೆಯೂ ಒಂದು. ಮೇಲುಕೋಟೆ ಪುಣ್ಯಕ್ಷೇತ್ರವಷ್ಟೇ ಅಲ್ಲ. ಸಮುದ್ರ ಮಟ್ಟದಿಂದ ಸುಮಾರು 3600 ಅಡಿಗಳಷ್ಟು ಎತ್ತರದಲ್ಲಿರುವ ಇದು ಅಘೋಷಿತ ಸುಂದರ ಗಿರಿಧಾಮ ಕೂಡ.

ಐತಿಹಾಸಿಕವಾಗಿ, ಪೌರಾಣಿಕವಾಗಿ ಮತ್ತು ಸಾಹಿತ್ಯಕವಾಗಿ ಬೆಳೆದ ಮೇಲುಕೋಟೆಯಲ್ಲಿ ಬೆಟ್ಟದ ಮೇಲಿನ ಯೋಗಾನರಸಿಂಹ ದೇವಾಲಯ, ರಾಯಗೋಪುರ, ಅಕ್ಕತಂಗಿಯರ ಕೊಳ, ಭುವನೇಶ್ವರಿ ಮಂಟಪ, ಸುಂದರ ಪುಷ್ಕರಣಿ ನೋಡುಗರ ಕಣ್ಮನ ಸೆಳೆವ ತಾಣಗಳು. ಇನ್ನು ಚೆಲುವ ನಾರಾಯಣನ ಚೆಲುವಿನ ಬಗ್ಗೆ ವರ್ಣಿಸಲು ಪದಗಳೇ ಸಾಲವು. ಒಟ್ಟಿನಲ್ಲಿ ಮೇಲುಕೋಟೆಗೆ ನೀವು ಒಮ್ಮೆ ಹೋಗಿ ಬಂದರೆ, ಹಲವು ದಿನಗಳ ಕಾಲ ಮೇಲುಕೋಟೆಯ ನೆನಪುನ್ನು ನೀವು ಮೆಲುಕು ಹಾಕುವುದರಲ್ಲಿ ಸಂಶಯವೇ ಇಲ್ಲ.

ಸಾರಸ್ವತ ಲೋಕ ಎಂದೆಂದೂ ಸ್ಮರಿಸುವ ಪು.ತಿ. ನರಸಿಂಹಾಚಾರ್‌ ಅವರ ಹೆಸರು ಕೇಳಿದವರಿಗೆಲ್ಲರಿಗೂ ಮೇಲುಕೋಟೆ ಇನ್ನೂ ಚೆನ್ನಾಗಿ ನೆನಪಿಗೆ ಬರುತ್ತದೆ ಕನ್ನಡ ಸಾಹಿತ್ಯಕ್ಕೆ ದಿಗ್ಗಜರನ್ನು ನೀಡಿದ ಈ ಊರು ಸಾಹಿತ್ಯಕವಾಗಿಯೂ ತನ್ನ ಹೆಸರನ್ನು ಭರತಖಂಡದಲ್ಲಿ ದಾಖಲಿಸಿದೆ. ಮೇಲುಕೋಟೆ ಚೆಲುವನಾರಾಯಣನ ಭಕ್ತರಾದ ಪು.ತಿ.ನ ತಮ್ಮ ಕಾವ್ಯದಲ್ಲಿ ಆತನ ಮಹಿಮೆ ಇತ್ಯಾದಿ ಗುಣಗಳನ್ನು ಕೊಂಡಾಡಿದ್ದಾರೆ.

ಇತಿಹಾಸ : 12ನೇ ಶತಮಾನದಲ್ಲಿ ಇದ್ದ ಶ್ರೀರಾಮಾನುಜಾಚಾರ್ಯರು ಮೇಲುಕೋಟೆಯನ್ನು 14 ವರ್ಷ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡಿದ್ದರೆಂದು ಇತಿಹಾಸ ಹೇಳುತ್ತದೆ. ಮೇಲುಕೋಟೆಯ ಪ್ರಮುಖ ಆರಾಧ್ಯ ದೈವವಾದ ತಿರುನಾರಾಯಣ ಸ್ವಾಮಿ ಮತ್ತು ಉತ್ಸವ ಮೂರ್ತಿ ಚೆಲುವನಾರಾಯಣಸ್ವಾಮಿ ಈ ನಾಡಿನ ನೆಚ್ಚಿನ ಆರಾಧ್ಯ ದೈವ. ಕ್ರಿಸ್ತ ಶಕ 1098ರಲ್ಲಿ ತಮಿಳುನಾಡಿನಿಂದ ಇಲ್ಲಿಗೆ ವಲಸೆ ಬಂದ ಶ್ರೀರಾಮಾನುಜಾಚಾರ್ಯರು ಜೈನ ಧರ್ಮಾನುಯಾಯಿಯಾಗಿದ್ದ ಹೊಯ್ಸಳ ದೊರೆ ಬಿಟ್ಟಿದೇವನನ್ನು ತಮ್ಮ ಪ್ರಭಾವದಿಂದ ವೈಷ್ಣವ ಧರ್ಮದ ಅನುಯಾಯಿಯನ್ನಾಗಿ ಮಾರ್ಪಡಿಸಿ ಆತನ ನೆರವಿನಿಂದ ಭವ್ಯ ದೇವಸ್ಥಾನ ನಿರ್ಮಿಸಿ, ಚೆಲುವನಾರಾಯಣ ಸ್ವಾಮಿಯನ್ನು ಇಲ್ಲಿ ಪುನರ್ಪ್ರತಿಷ್ಠಾಪಿಸಿದರೆಂದು ಇತಿಹಾಸ ಹೇಳುತ್ತದೆ.

ಮೈಸೂರು ಅರಸರ ಕೊಡುಗೆ : ಮೈಸೂರು ದೊರೆಗಳು ಕೂಡಾ ಮೇಲುಕೋಟೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಿಕ್ಕದೇವರಾಜರು ಯೋಗಾನರಸಿಂಹಸ್ವಾಮಿಯ ಬೆಟ್ಟಕ್ಕೆ ನೂತನ ರಾಜಗೋಪುರವನ್ನೂ , ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಲ್ಲದೆ ದೇವರಿಗೆ ಅನೇಕ ಒಡವೆಗಳನ್ನು ನೀಡಿದ್ದಾರೆ. ಮುಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರೂ ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರ ಕುರುಹಾಗಿ ಅವರ ಮತ್ತು ನಾಲ್ವರು ರಾಣಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ದಸರೆಯಲ್ಲಿ ಪಟ್ಟದ ಚೆಲುವ : ಆಶ್ವಯುಜ ಮಾಸದಲ್ಲಿ ಇಲ್ಲಿ ಅನೂಚಾನವಾಗಿ ನಡೆದು ಬಂದ ಸಂಪ್ರದಾಯದಂತೆ ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆಚರಿಸಲಾಗುತ್ತದೆ. ಆದರೆ, ಮೇಲುಕೋಟೆಯ ದಸರೆಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ದಸರೆಯ ಕಾಲದಲ್ಲಿ ಚೆಲವಾದ ಚೆಲುವನಾರಾಯಣನನ್ನು ಮಹಾರಾಜರ ಉಡುಗೆ ತೊಡುಗೆಗಳಿಂದ ಅಲಂಕರಿಸಲಾಗುತ್ತದೆ. ಮೈಸೂರು ಒಡೆಯರು, ದಸರೆಯ ಕಾಲದಲ್ಲಿ ಇಲ್ಲೂ ಉತ್ಸವ ಏರ್ಪಡಿಸುತ್ತಿದ್ದರು.

ಚತುರ್ಮುಖ ಗೋಪುರ : ರಾಜ್ಯದಲ್ಲಿಯೇ ವಿಶಿಷ್ಟ ಎನ್ನಬಹುದಾದ ಚತುರ್ಮುಖ ರಾಜಗೋಪುರ ಹೊಂದಿರುವ ನಾರಾಯಣ ಸ್ವಾಮಿ ದೇವಾಲಯ ಹೊರ ಮತ್ತು ಒಳ ಕೈಸಾಲೆಗಳನ್ನು ಹೊಂದಿದೆ. ಸಭಾಮಂಟಪದಲ್ಲಿರುವ 100 ಕಲ್ಲು ಗಂಬಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರಮುಖ ಸನ್ನಿವೇಶಗಳ ಚಿತ್ರಣವಿದೆ. ಶ್ರೀಯೋಗಾನರಸಿಂಹ ದೇವಾಲಯವನ್ನು ಬೆಟ್ಟದ ದೊಡ್ಡ ಬಂಡೆಯ ಮೇಲೆ ನಿರ್ಮಿಸಲಾಗಿದ್ದು, ಕೆಳಗಡೆ ಇರುವ ವಾಸ್ತುಶಿಲ್ಪದ ಕಟ್ಟಡ ಆಧುನಿಕ ತಂತ್ರಜ್ಞಾನಕ್ಕೆ ಸವಾಲಾಗಿದೆ. ದೇವಾಲಯಟದ ರಾಜಗೋಪುರದ ಎತ್ತರ 150 ಅಡಿಗಳು.

ಮೇಲುಕೋಟೆಯಲ್ಲಿ ವರ್ಷಕ್ಕೊಮ್ಮೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ರಾಜಮುಡಿ, ರಾಜಮುಡಿ, ವೈರಮುಡಿ, ಬ್ರಹ್ಮೋತ್ಸವಗಳು ವೈಭವದಿಂದ ಹತ್ತು ದಿನಗಳ ಕಾಲ ನಡೆಯುತ್ತವೆ. ಈ ಉತ್ಸವಗಳಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಮಂಡ್ಯ, ಮೈಸೂರು, ಹಾಸನ, ನಾಗಮಂಗಲ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಿಂದ ಮೇಲುಕೋಟೆಗೆ ಬಸ್‌ ಸೌಕರ್ಯವಿದೆ. ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ. ಸರಕಾರ ಈ ಐತಿಹಾಸಕ ಸ್ಥಳದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ, ಹೆಚ್ಚು ಹೆಚ್ಚು ಪ್ರವಾಸಿಗರನ್ನು ಚೆನ್ನಿಗರಾಯ ಆಕರ್ಷಿಸುವುದರಲ್ಲಿ ಸಂದೇಶವಿಲ್ಲ. ಮೇಲುಕೋಟೆಯ ಬೆಟ್ಟವ ನೋಡಿ ನೀವು ಶ್ರೀರಂಗಪಟ್ಟಣಕ್ಕೂ, ರಂಗನತಿಟ್ಟಿಗೂ ಹೋಗಿ ಬರಬಹುದು. ರಾತ್ರಿ ಉಳಿಯುವುದಾದರೆ, ಮಂಡ್ಯವೇ ಸೂಕ್ತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+