ಕೆನರಾ ಬ್ಯಾಂಕ್ಗೆ ಅ.10ರಂದು ಕಾಮನ್ವೆಲ್ತ್ ಪ್ರತಿನಿಧಿಗಳು
ಬೆಂಗಳೂರು :ಗ್ರಾಮೀಣ ಪ್ರದೇಶದ ಮಹಿಳೆಯರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿ ಸ್ವಾವಲಂಬಿಗಳಾಗುವಲ್ಲಿ ಕೆನರಾ ಬ್ಯಾಂಕ್ ವಹಿಸಿರುವ ಪಾತ್ರದ ಬಗ್ಗೆ ಅಧ್ಯಯನ ನಡೆಸಲು ಹಾಗೂ ಸಾಧನೆಯ ಪರಾಮರ್ಶೆಗಾಗಿ ಕಾಮನ್ವೆಲ್ತ್ ರಾಷ್ಟ್ರಗಳ ಪ್ರತಿನಿಧಿಗಳು ಮಂಗಳವಾರ ನಗರದ ಕೆನರಾಬ್ಯಾಂಕ್ ಕಚೇರಿಗೆ ಭೇಟಿ ನೀಡಲಿದ್ದಾರೆ.
ಬಾಂಗ್ಲಾದೇಶ, ಕೊರೀಯಾ, ಭೂತಾನ್, ಕೀನ್ಯಾ, ತಾಂಜೇನಿಯಾ, ನೇಪಾಳ್, ಶ್ರೀಲಂಕಾ ಮೊದಲಾದ ದೇಶಗಳ ಪ್ರತಿನಿಧಿಗಳು ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ವೃತ್ತ ಕಚೇರಿಗೆ ಭೇಟಿ ನೀಡಿ ಬ್ಯಾಂಕಿನ ಸಾಧನೆಗಳ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರು ಆದಾಯ ತರುವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.
ಬ್ಯಾಂಕಿನ ಜನರಲ್ ಮ್ಯಾನೇಜರ್ ಎಂ.ಎಸ್. ರಾವ್ ಅವರು, ಕಾಮನ್ವೆಲ್ತ್ ಪ್ರತಿನಿಧಿಗಳಿಗೆ ಬ್ಯಾಂಕಿನ ಸಾಧನೆಯ ವಿವರಗಳನ್ನು ನೀಡಲಿದ್ದಾರೆ. ಈ ಪ್ರತಿನಿಧಿಗಳ ತಂಡ ಆನಂತರ ಬ್ಯಾಂಕಿನ ವಿಜಯಪುರ ಶಾಖೆ ಹಾಗೂ ರೇಷ್ಮೆ ರೀಲಿಂಗ್ ಉದ್ಯಮಕ್ಕಾಗಿ ಬ್ಯಾಂಕ್ ಮಹಿಳೆಯರಿಗೆ ನೀಡಿರುವ ನೆರವಿನ ಹಾಗೂ ಉದ್ಯಮದ ಪ್ರಗತಿ ಪರಿಶೀಲನೆಗಾಗಿ ತೆರಳಲಿದೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.