ಜಂಬೂಸವಾರಿಗೆ ದಾರಿಬಿಡುತ್ತಿರುವ ಮಳೆ
ಬೆಂಗಳೂರು : ಮಳೆ ಹೊಯ್ದು ನಿಂತಿದೆ. ಸುಡುತ್ತಿದ್ದ ಗುಲ್ಬರ್ಗಾ ತಣ್ಣಗಾಗಿದೆ. ಅಲ್ಲಿ ದಿನದ ಗರಿಷ್ಠ ಉಷ್ಣಾಂಶವೇ 18.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ದಕ್ಷಿಣ ಒಳನಾಡಿನಲ್ಲಿ ಹಾಗೂ ಕರಾವಳಿಯ ಕೆಲವೆಡೆ ಮಾತ್ರ ಚದುರಿದಂತೆ ಮಳೆ ಬಿದ್ದಿದೆ. ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಕೆಲವೆಡೆ ಚದುರಿದಂತೆ ಮಳೆ ಆಗಲಿದೆ.
ತಿಪಟೂರು, ಬಾದಾಮಿಯಲ್ಲಿ ತಲಾ 5 ಸೆಂಟಿ ಮೀಟರ್, ಲೋಕಾಪುರ, ಚಿತ್ರದುರ್ಗಗಳಲ್ಲಿ 4 ಸೆಂಟಿ ಮೀಟರ್, ಚಿಕ್ಕಬಳ್ಳಾಪುರ, ಅರಕಲಗೂಡು, ಎನ್.ಆರ್.ಪುರ, ಎರಗಟ್ಟಿಯಲ್ಲಿ ತಲಾ 3 ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ 1 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಬೀಳುವ ಸಂಭವ ಇದೆ. ಅಂದಹಾಗೆ ಇಂದು ಬೆಂಗಳೂರಿನಲ್ಲಿ ಗರಿಷ್ಠ 29 ಹಾಗೂ ಕನಿಷ್ಠ 19.ಡಿ.ಸೆ. ತಾಪಮಾನ ಇತ್ತು. ಮೈಸೂರಿನ ಕೆಲವು ಸಂಘಟನೆಗಳು ವಿಶ್ವವಿಖ್ಯಾತ ದಸರೆಯ ಜಂಬೂಸವಾರಿಗೆ ಅಡ್ಡಿ ಮಾಡುತ್ತೇವೆ ಎಂದು ಹೇಳಿಕೊಂಡಿರುವಾಗ ತಾನೂ ಅಡ್ಡಿ ಮಾಡಬಾರದೆಂದು ಮಳೆ ತಣ್ಣಗಾಗುತ್ತಿರುವಂತಿದೆ.