ಬಟೋಹಿ ಭಾರತ ಭೇಟಿ ವೇಸ್ಟು ? ಕಿಂಗ್ ವರದಿ ಸಲ್ಲಿಕೆ ವಿಳಂಬ
ಕೇಪ್ಟೌನ್ : ಒಲಂಪಿಕ್ಸ್ ಗುಂಗಿನಲ್ಲಿ ಮೈಮರೆತಿದ್ದ ಎಷ್ಟೋ ಜನಕ್ಕೆ ದಕ್ಷಿಣ ಆಫ್ರಿಕದಲ್ಲಿ ಮ್ಯಾಚ್ಫಿಕ್ಸಿಂಗ್ ತನಿಖೆ ನಡೆಸುತ್ತಿರುವ ಕಿಂಗ್ ಆಯೋಗದ ವಕೀಲೆ ಶಮೀಲ ಬಟೋಹಿ ಭಾರತಕ್ಕೆ ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ. ದೆಹಲಿ ಪೊಲೀಸರಿಂದ ಕ್ರೋನಿಯೆ- ಬುಕ್ಕಿ ಸಂಭಾಷಣೆಯಿರುವ ಶ್ರವ್ಯ ಕೆಸೆಟ್ಟಿನ ಪ್ರತಿ ಪಡೆಯುವುದು ಬಟೋಹಿ ಭಾರತ ಭೇಟಿಯ ಉದ್ದಿಶ್ಯವಾಗಿತ್ತು. ಅದನ್ನು ಅವರು ಪಡೆದುದಾಗಿಯೂ ವರದಿಗಳು ಪ್ರಕಟವಾದವು. ಆದರೆ ತಾವು ಯಾವ ಕೆಸೆಟ್ಟನ್ನೂ ಭಾರತದಿಂದ ತಂದಿಲ್ಲ ಎಂದು ಬಟೋಹಿ ಈಗ ಹೇಳಿದ್ದು, ತನಿಖೆ ಮಂದಗತಿಯಲ್ಲಿ ಸಾಗಿದೆ.
ಕಿಂಗ್ ಆಯೋಗ ನವೆಂಬರ್ ಹೊತ್ತಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದು, ಇವತ್ತೋ ನಾಳೆಯೋ ಅದು ವರದಿ ಸಲ್ಲಿಸಲಿದೆ ಅನ್ನುವುದು ಸುಳ್ಳಾಗಿದೆ. ಈ ಹಿಂದೆ ಬಟೋಹಿ, ಭಾರತದ ಭೇಟಿಯಿಂದ ತಮಗೆ ಸಾಕಷ್ಟು ಮಾಹಿತಿ ದೊರೆತಿದ್ದು , ಕ್ರೋನಿಯೆ ಕೆಸೆಟ್ ಕೂಡ ಸಿಕ್ಕಿದೆ ಎಂದು ಹೇಳಿದುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಕಿಂಗ್ ಆಯೋಗದ ವಕ್ತಾರ ಜಾನ್ ಬ್ಯಾಕಾನ್ ಈಗ ಹೀಗೆ ಹೇಳುತ್ತಾರೆ- ‘ಬಟೋಹಿ ಯಾವುದೇ ಮಾಧ್ಯಮಕ್ಕೆ ಹಾಗೆ ಹೇಳಲಿಲ್ಲ ಎಂದು ಆಯೋಗಕ್ಕೆ ತಿಳಿಸಿದ್ದಾರೆ. ಅವರು ಕ್ರೋನಿಯೆ ಕೆಸೆಟ್ಟಿನ ಪ್ರತಿಯನ್ನೂ ತಂದಿಲ್ಲ. ಆಯೋಗ ತನಿಖೆಯ ಕಾರ್ಯತಂತ್ರವನ್ನು ಬದಲಿಸಿ, ಹೊಸ ಆಯಾಮಗಳತ್ತ ಗಮನ ಹರಿಸಲಿದೆ. ನವೆಂಬರ್ ಹೊತ್ತಿಗೆ ವರದಿ ಸಿದ್ಧಪಡಿಸಲಿದೆ’.
ಒಂದೆಡೆ ಕಪಿಲ್ ದೇವ್ ಅಪರಾಧಿಯೋ ಅಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಭಾರತದ ಸಿಬಿಐ ತಿಪ್ಪರಲಾಗ ಹಾಕುತ್ತಿದೆ. ಇದಕ್ಕೆ ಹೊರತೆಂಬಂತಿದ್ದ ಕಿಂಗ್ ಆಯೋಗದ ತನಿಖೆಯೂ ಈಗ ಆಮೆ ವೇಗದಲ್ಲಿ ನಡೆಯುತ್ತಿರುವುದು ವಿಪರ್ಯಾಸ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
(ಐಎಎನ್ಎಸ್)