ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ
ಬೆಂಗಳೂರು : ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಅಡ್ಡಿಯುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶುಕ್ರವಾರ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ. ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೂ ಎಂದೂ ಅವರು ಹೇಳಿದ್ದಾರೆ.
ವಿಜಯ ದಶಮಿಯ ದಿನ ಜಂಬೂ ಸವಾರಿ ನಡೆದೇ ತೀರುತ್ತದೆ ಎಂದು ಸಚಿವ ವಿಶ್ವನಾಥ್ ಪ್ರಕಟಿಸುತ್ತಿದ್ದಂತೆಯೇ ಮೈಸೂರಿನಲ್ಲಿ ಡಾ. ರಾಜ್ ಅಭಿಮಾನಿಗಳು ನಾವು ಈ ಬಾರಿ ಅದ್ದೂರಿಯ ದಸರಾ ಮಹೋತ್ಸವ - ಮೆರವಣಿಗೆಗೆ ಆವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ದಸರಾ ನಮ್ಮ ನಾಡಹಬ್ಬ, ದಸರೆಯ ಮೆರವಣಿಗೆ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ, ನಮ್ಮ ನಾಡ ಹಬ್ಬದ ಉತ್ಸವಕ್ಕೆ ಚ್ಯುತಿ ಬಾರದಂತೆ ವರ್ತಿಸ ಬೇಕಾದ್ದು, ಕನ್ನಡಿಗರೆಲ್ಲರ ಕರ್ತವ್ಯ, ಎಲ್ಲ ಸಂಘ ಸಂಸ್ಥೆಗಳೂ ಸರಕಾರದೊಂದಿಗೆ ಸಹಕರಿಸಬೇಕು ಎಂದು ಖರ್ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಉನ್ನತ ಅಧಿಕಾರಿಗಳ ಸಭೆ ಕರೆದು ಸಮಾಲೋಚಿಸಲಾಗುವುದು ಎಂದೂ ಹೇಳಿದ್ದಾರೆ.
ಅಪಹರಣ ಹತ್ತಿಕ್ಕಲು ವಿಶೇಷ ಪಡೆ : ರಾಜ್ಕುಮಾರ್ ಅವರ ಅಪಹರಣವಾಗಿ 68 ದಿನಗಳು ಕಳೆದಿವೆ. ಕನ್ನಡಿಗರ ಭಾವನಾತ್ಮಕ ಸಂಬಂಧಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಹೀಗಾಗಿ ಅಭಿಮಾನಿಗಳು ವೈಭವದ ದಸರೆಗೆ ಅಡ್ಡಿ ಮಾಡುತ್ತೇವೆ ಎಂದಿದ್ದಾರೆ. ಅದರಲ್ಲಿ ತಪ್ಪಿಲ್ಲ. ಆದರೆ, ಸರಕಾರ ತನ್ನ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಇದನ್ನು ಅರಿತು ಎಲ್ಲರೂ ದಸರಾ ಮಹೋತ್ಸವ ಮೆರವಣಿಗೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಕಳೆದೆರಡು ದಿನಗಳ ಹಿಂದೆಯಷ್ಟೇ ನಗರದ ಉದ್ಯಮಿ ನಾರಾಯಣ ಭಟ್ ಅಪಹರಣವಾಗಿತ್ತು. ಅವರು ಸುರಕ್ಷಿತವಾಗಿ ಬಿಡುಗಡೆ ಗೊಂಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಅಪಹರಣ ಪ್ರಕರಣಗಳು ಜರುಗದಂತೆ ಹಾಗೂ ಅವುಗಳನ್ನು ಹತ್ತಿಕ್ಕಲು ವಿಶೇಷ ದಳವನ್ನು ರಚಿಸಲಾಗುವುದು ಎಂದೂ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಆಯ್ದ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲೂ ಸರಕಾರ ಉದ್ದೇಶಿಸಿದೆ ಎಂದೂ ಅವರು ಹೇಳಿದ್ದಾರೆ.