ಬಿಡದೆ ಸುರಿದ ಮಳೆ ಪಡೆದ ಬಿಡುವು
ಬೆಂಗಳೂರು :ಕಳೆದ ಕೆಲವು ದಿನಗಳಿಂದಲೂ ರಾಜ್ಯಾದ್ಯಂತ ಬಿಡುವಿಲ್ಲದೆ ಸುರಿದ ಮಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಬಹುತೇಕ ಪೂರ್ಣ ವಿರಾಮವನ್ನೇ ಪಡೆದಿದೆ. ನಿರಂತರವಾಗಿ ಹತ್ತಾರು ಸೆಂಟಿ ಮೀಟರ್ ಮಳೆ ಸುರಿಸಿ ಸುಸ್ತಾಗಿದ್ದ ಮಳೆರಾಯ ವಿಶ್ರಾಂತಿಯಲ್ಲಿದ್ದಾನೆ.
ಮಳೆರಾಯ ವಿರಮಿಸಿದ ಮೇಲೆ ಸೂರ್ಯ ದೇವ ಸುಮ್ಮನಿರಲಾದೀತೆ ? ಮಳೆರಾಯನ ಅನುಪಸ್ಥಿತಿಯಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಸೂರ್ಯ ತನ್ನ ಪ್ರತಾಪ ಮೆರೆದಿದ್ದಾನೆ. ತತ್ಪರಿಣಾಮವಾಗಿ ನಾಡಿನ ಅಲ್ಲಲ್ಲಿ ಒಣಹವೆ ಮೂಡಿದೆ. ಹಗಲಿನ ಉಷ್ಣಾಂಶದಲ್ಲಿ ಕೊಂಚ ಏರು ಪೇರಾಗಿದೆ. ಕೆಲವೆಡೆ ದಿನದ ಉಷ್ಣತೆ ಏರಿದೆ.
ಕರಾವಳಿಯ ಕೆಲವೆಡೆ ದಿನದ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಾಗಿತ್ತು. ಉತ್ತರ ಒಳನಾಡಿನಲ್ಲೂ ಬದಲಾವಣೆ ಕಂಡುಬಂತು. ರಾಜ್ಯದಲ್ಲಿ ದಿನದ ಗರಿಷ್ಠ ತಾಪಮಾನ ಗುಲ್ಬರ್ಗಾದಲ್ಲಿ ದಾಖಲಾಗಿದೆ. ಅಲ್ಲಿ ಹಗಲಿನ ಉಷ್ಣಾಂಶ 33.4 ಡಿ.ಸೆ. ಇತ್ತು. ಅಂತೆಯೇ ರಾತ್ರಿಯ ಕನಿಷ್ಠ ಉಷ್ಣಾಂಶ ಬೆಳಗಾವಿಯಲ್ಲಿ 18.8 ಡಿ.ಸೆ. ದಾಖಲಾಗಿದೆ.
ಅರಕಲಗೂಡಿನಲ್ಲಿ 3 ಸೆಂಟಿ ಮೀಟರ್ ನಿಪ್ಪಾಣಿ ಹಾಗೂ ಬೈಲ ಹೊಂಗಲಗಳಲ್ಲಿ ತಲಾ 1 ಸೆಂಟಿ ಮೀಟರ್ ಮಾತ್ರ ಮಳೆ ಬಿದ್ದಿದೆ. ಉಳಿದಂತೆ ಬೇರೆಡೆ ಮಳೆಯಾದ ವರದಿಗಳು ಬಂದಿಲ್ಲ.
ಹವಾಮಾನ ಇಲಾಖೆಯ ಮುನ್ಸೂಚನೆಯ ರೀತ್ಯ ಮುಂದಿನ 48 ಗಂಟೆಗಳ ಅವಧಿಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡು ಬರುವುದಿಲ್ಲ. ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ ಆಗುವ ಸಂಭವ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ.