ಚೆನ್ನೈ ಮೇಲೆ ಒತ್ತಡ ಹೇರಲು ಕೇಂದ್ರಕ್ಕೆ ರಾಜ್ಯ ಸಂಸದರ ಮನವಿ
ನವದೆಹಲಿ : ರಾಜ್ ಬಿಡುಗಡೆ ಸಂಬಂಧ ತಮಿಳುನಾಡು ಸರಕಾರದ ಮೇಲೆ ಒತ್ತಡ ಹೇರಬೇಕೆಂದು ರಾಜ್ಯ ಸಂಸತ್ ಸದಸ್ಯರ ನಿಯೋಗ ವಾಜಪೇಯಿ ಅವರಿಗೆ ಗುರುವಾರ ಮನವಿ ಮಾಡಿದೆ. ರಾಜ್ಕುಮಾರ್ ಅವರ ಅಪಹರಣವಾಗಿ 68 ದಿನಗಳು ಕಳೆದರೂ ಅವರ ಬಿಡುಗಡೆಯ ಸೂಚನೆಗಳೇ ಕಾಣುತ್ತಿಲ್ಲ ಹೀಗಾಗಿ ಹೆಚ್ಚಿನ ಕಾಳಜಿ ವಹಿಸಿ ರಾಜ್ ಬಿಡುಗಡೆಗೆ ಪ್ರಯತ್ನಿಸುವಂತೆ ತಮಿಳುನಾಡು ಸರಕಾರದ ಮೇಲೆ ಒತ್ತಡ ಹೇರಲೇ ಬೇಕು ಎಂದು ಪ್ರಧಾನಿಯವರನ್ನು ಕೋರಲಾಗಿದೆ.
ಮಾರ್ಗರೆಟ್ ಆಳ್ವ, ಐ.ಜಿ. ಸನದಿ, ಜಿ.ಎಸ್. ಬಸವರಾಜ್, ಡಿ.ಕೆ. ತಾರಾದೇವಿ, ಬಿಂಬಾರಾಯ್ಕರ್ ಅವರನ್ನು ಒಳಗೊಂಡಿದ್ದ ಕರ್ನಾಟಕದ ಸಂಸತ್ ಸದಸ್ಯರ ನಿಯೋಗದ ಕೋರಿಕೆಯನ್ನು ಕೇಳಿದ ಪ್ರಧಾನಿಯವರು ಕೇಂದ್ರದ ಗೃಹ ಕಾರ್ಯದರ್ಶಿಯವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ರಾಜ್ಕುಮಾರ್ ಅವರ ಬಿಡುಗಡೆ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರದ ಪ್ರಯತ್ನಕ್ಕೆ ಪೂರಕವಾದ ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸಿದ್ಧವಿದೆ ಎಂಬ ಭರವಸೆಯನ್ನು ನಿಯೋಗದ ಪ್ರತಿನಿಧಿಗಳಿಗೆ ಪ್ರಧಾನಿ ನೀಡಿದ್ದಾರೆ.
ಏಕಾಂಗಿಯಾಗೇ ಕಾಡಿಗೆ ಹೋಗುವೆ ವೇಣುಗೋಪಾಲ್ : ಈ ಮಧ್ಯೆ ವರನಟ ರಾಜ್ಕುಮಾರ್ ಹಾಗೂ ಇತರ ಇಬ್ಬರು ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರಲು ತಾವು ಏಕಾಂಗಿಯಾಗೇ ಕಾಡಿಗೆ ಹೋಗಲು ಸಿದ್ಧವಿರುವುದಾಗಿ ವೀರಪ್ಪನ್ ಸಹಚರರಾದ ಟಾಡಾ ಬಂದಿಗಳ ಪರ ವಕಾಲತ್ತು ವಹಿಸಿರುವ ಮೈಸೂರಿನ ವಕೀಲ ವೇಣುಗೋಪಾಲ್ ತಿಳಿಸಿದ್ದಾರೆ.
ನಾನು ನಕ್ಕೀರನ್ ಗೋಪಾಲ್ ಜತೆ ಕಾಡಿಗೆ ಹೋಗಲು ಸಿದ್ಧನಿಲ್ಲ ಎಂಬುದಾಗಿ ರಾಜ್ಯದ ಮಂತ್ರಿ ಚಂದ್ರೇಗೌಡರು ಹೇಳಿರುವುದ ಸೂಕ್ತವಲ್ಲ ಎಂದ ಅವರು, ಸರಕಾರ ಅನುಮತಿ ನೀಡಿದರೆ, ನಾನೊಬ್ಬನೇ ಕಾಡಿಗೆ ಹೋಗುತ್ತೇನೆ ಎಂದು ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.
ಗೋಪಾಲ್ಗಿನ್ನೂ ವೀರಪ್ಪನ್ ಸಂದೇಶ ಸಿಕ್ಕಿಲ್ಲ : ಐದನೇ ಬಾರಿಗೆ ಸಂಧಾನಯಾತ್ರೆಗೆ ಕಾಡಿಗೆ ಹೋಗಲು ತುದಿಗಾಲಿನಲ್ಲಿ ನಿಂತಿರುವ ಗೋಪಾಲ್ ಅವರಿಗೆ ಇನ್ನೂ ವೀರಪ್ಪನ್ನಿಂದ ಯಾವುದೇ ಸಂದೇಶ ದೊರಕದಿರುವ ಕಾರಣ ಅವರು, ಇನ್ನೂ ಚೆನ್ನೈನಲ್ಲೇ ಕಾಯುತ್ತಿದ್ದಾರೆ ಎಂದು ನಮ್ಮ ಚೆನ್ನೈ ವರದಿಗಾರರು ತಿಳಿಸಿದ್ದಾರೆ.