ಮರ, ಮನೆಗಳ ಉರುಳಿಸಿದ ಮಳೆ
ಬೆಂಗಳೂರು : ಬಿಡದೆ ನಿತ್ಯ ಸಂಜೆ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಮನೆಗಳನ್ನೂ ಮರಗಳನ್ನೂ ಧರೆಗುರುಳಿಸುತ್ತಿದೆ. ಶನಿವಾರ, ಭಾನುವಾರ ಹಾಗೂ ಸೋಮವಾರವೂ ಸಂಜೆ 6ರ ನಂತರ ಆರಂಭವಾದ ಮಳೆ ಸತತವಾಗಿ ನಾಲ್ಕಾರು ಗಂಟೆಗಳ ಕಾಲ ಎಡೆಬಿಡದೆ ಸುರಿಯಿತು.
ಮೊನ್ನೆ ಮಾರುಕಟ್ಟೆ ಪ್ರದೇಶದಲ್ಲಿ ಹಳೆಯ ಕಟ್ಟಡ ಕುಸಿದರೆ, ನಿನ್ನೆ ಜಗಜೀವನರಾಂ ನಗರದಲ್ಲಿ ಕಟ್ಟಡ ಸಮುಚ್ಛಯ ನೆಲಕಚ್ಚಿದೆ. ಬೆಂಗಳೂರಿನಲ್ಲಿ ಬುಡಮೇಲಾದ ಮರಗಳ ಸಂಖ್ಯೆ ಎಷ್ಟು ಎಂದು ಯಾರೂ ಲೆಕ್ಕ ಇಟ್ಟಿಲ್ಲ. ರಾಜ್ಯದ ನಾನಾ ಭಾಗಗಳಲ್ಲೂ ಮಳೆ ಬೀಳುತ್ತಿದೆ. ಕೆಲವೆಡೆ ದಿನದ ಉಷ್ಣಾಂಶ ಏರಿದ್ದರೆ, ಮತ್ತೆ ಕೆಲವೆಡೆ ಭಾರಿ ಪ್ರಮಾಣದಲ್ಲಿ ಇಳಿದಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿತ್ತು. ಕರಾವಳಿಯ ಅನೇಕ ಕಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆಯೂ ಮಳೆ ಆಗಿದೆ. ದೇವನಹಳ್ಳಿಯಲ್ಲಿ 7 ಸೆಂಟಿ ಮೀಟರ್, ಅಜ್ಜಂಪುರದಲ್ಲಿ 5, ಕಮಟಾ, ಸಿದ್ದಾಪುರ, ಶಿರಾಳಕೊಪ್ಪಗಳಲ್ಲಿ 3, ಬಾಗೇಪಲ್ಲಿಯಲ್ಲಿ 2 ಸೆಂಟಿ ಮೀಟರ್ ಮಳೆ ಆಗಿದೆ.
ಕರಾವಳಿ ಪ್ರದೇಶದಲ್ಲಿ ಹಗಲಿನ ಉಷ್ಣಾಂಶ ಕಡಿಮೆ ಆಗಿದ್ದರೆ, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಹಗಲಿನ ಉಷ್ಣಾಂಶ ಏರಿದೆ. ಗುಲ್ಬರ್ಗಾದಲ್ಲಿ ದಿನದ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆ. ದಾಖಲಾಗಿದೆ. ರಾತ್ರಿಯ ಕನಿಷ್ಠ ಉಷ್ಣಾಂಶ 18.5 ಡಿಗ್ರಿ ಸೆ. ಚಿತ್ರದುರ್ಗದಲ್ಲಿ ದಾಖಲಾಗಿದೆ.
ಮುನ್ಸೂಚನೆಯಂತೆ ಮುಂದಿನ 48ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಮಳೆ ಆಗುವ ನಿರೀಕ್ಷೆ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಆಗುವ ನಿರೀಕ್ಷೆ ಇದೆ.