ಮಮತಾ ಒತ್ತಡಕ್ಕೆ ಮಣಿದ ಪ್ರಧಾನಿ, ತೈಲ ಬೆಲೆ ಇಳಿಕೆ ಸಂಭವ
ಕಲ್ಕತ್ತಾ : ಏಕಾಏಕಿ ಏರಿದ ತೈಲೋತ್ಪನ್ನಗಳ ಬೆಲೆಯನ್ನು ಭಾಗಶಃ ಇಳಿಸುವ ಭರವಸೆಯನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೀಡಿದ್ದಾರೆ. ಈ ಸಂಬಂಧ 6ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಸಭೆ ಅತ್ಯಂತ ಮಹತ್ವದ್ದಾಗಿದೆ.
ಈಗಾಗಲೇ ಏರಿಸಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆ ಎಣ್ಣೆ ಬೆಲೆಗಳನ್ನು ಶುಕ್ರವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಭಾಗಶಃ ಕಡಿಮೆ ಮಾಡುವ ಬಗ್ಗೆ ಪ್ರಧಾನಿಯವರು ಮಮತಾ ಬ್ಯಾನರ್ಜಿ ಅವರಿಗೆ ಆಶ್ವಾಸನೆ ನೀಡಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಈ ವಿಷಯವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಸುದೀಪ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ತೊಂದರೆ ಆಗುವ ರೀತಿಯಲ್ಲಿ ತೈಲೋತ್ಪನ್ನಗಳ ಬೆಲೆ ಏರಿಸಿದ್ದರಿಂದ ಅದನ್ನು ಪ್ರತಿಭಟಿಸಿ ಸಚಿವರುಗಳಾದ ಮಮತಾ ಬ್ಯಾನರ್ಜಿ ಹಾಗೂ ಅಜಿತ್ ಪಾಂಜಾ ಅವರು ಶನಿವಾರ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪ್ರಧಾನಿ ಅವರೇ ಮಧ್ಯಪ್ರವೇಶಿಸಿ ಬಿಕ್ಕಟ್ಟು ಪರಿಹರಿಸುವ ಕಾಳಜಿ ವಹಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರವನ್ನು ಕೈಬಿಡಲು ಈ ನಾಯಕರಿಬ್ಬರೂ ನಿರ್ಧರಿಸಿದ್ದಾರೆ. ಬೆಲೆ ಇಳಿಕೆ ಸಂಬಂಧ ಅಧಿಕೃತ ಪ್ರಕಟಣೆಗೆ ಅವರಿಬ್ಬರೂ ಕಾದಿದ್ದಾರೆ.
ಸಚಿವರಿಬ್ಬರೂ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಂಧಾನಕ್ಕಾಗಿ ಪ್ರಧಾನಿಯವರ ಕಾರ್ಯಾಲಯದ ವಿಶೇಷ ಕರ್ತವ್ಯಾಧಿಕಾರಿ ಸುಧೀಂದ್ರ ಕುಲಕರ್ಣಿ ಇಲ್ಲಿಗೆ ಆಗಮಿಸಿ, ಎರಡನೇ ಸುತ್ತಿನ ಮಾತುಕತೆ ನಡೆಸಿದರು. ಈ ಮಾತುಕತೆಯ ನಂತರ ಬ್ಯಾನರ್ಜಿ ತಮ್ಮ ರಾಜೀನಾಮೆ ವಾಪಸು ಪಡೆಯುವ ಇಂಗಿತವನ್ನು ವ್ಯಕ್ತಪಡಿಸಿದರು.
ನಾಯಕ್ ಎಚ್ಚರಿಕೆ : ತೈಲೋತ್ಪನ್ನಗಳ ಬೆಲೆಯನ್ನು ಭಾಗಶಃ ಇಳಿಸುವ ಬಗ್ಗೆ ಪ್ರಧಾನಿಯವರಿದಂ ಭರವಸೆ ದೊರಕಿದೆ ಎಂಬ ವಿಷಯ ತಿಳಿದ ನಂತರ ನವದೆಹಲಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ರಾಂ ನಾಯಕ್ ಅವರು, ಬೆಲೆ ಇಳಿಸುವುದರಿಂದ ತೈಲ ನಿಧಿಯ ಕೊರತೆ ಹೆಚ್ಚುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿಯವರಿಗೆ ಈ ಎಲ್ಲ ವಿಷಯವೂ ಗೊತ್ತಿದೆ. ಅವರಿಗೆ ಬೆಲೆ ಏರಿಕೆ ಕೈಬಿಡುವ ಅಧಿಕಾರವೂ ಇದೆ. ಈ ಸಂಬಂಧ ಅಂತಿಮ ನಿರ್ಧಾರ ಪ್ರಧಾನಿಯವರಿಗೇ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.