ಕಾಗವಾಡ ವಿಧಾನಸಭಾ ಕ್ಷೇತ್ರ ಸಂಯುಕ್ತ ಜನತಾದಳ ಪಾಲು
ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರ ಸಂಯುಕ್ತ ಜನತಾದಳ ಪಾಲಾಗಿದೆ. ಸಂಯುಕ್ತ ಜನತಾದಳ ಅಭ್ಯರ್ಥಿ ಭರಮಗೌಡ ಅಲಿಯಾಸ್ ರಾಜು ಕಾಗೆ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಆಡಳಿತಾರೂಢ ಕಾಂಗ್ರೆಸ್ನ ವಿಜಯಾ ತಾಯಿ ಪಾಟೀಲ್ ಅವರನ್ನು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
43 ಸಾವಿರದ 557 ಮತಗಳನ್ನು ಗಳಿಸಿದ ಭರಮಗೌಡ ಅವರು, 42 ಸಾವಿರದ 538 ಮತ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ವಿಜಯಾ ಅವರನ್ನು ಪರಾಭವಗೊಳಿಸಿದ್ದಾರೆ. ಬಿ.ಜೆ. ಪಿ. ಅಭ್ಯರ್ಥಿ ಸಂಗನಗೌಡ ಪಾಟೀಲ್ರಿಗೆ ಕೇವಲ 3 ಸಾವಿರದ 61 ಮತಗಳು ಮಾತ್ರ ಲಭಿಸಿವೆ.
ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಸಂಯುಕ್ತ ಜನತಾದಳ ಅಸ್ತಿತ್ವ ಉಳಿಸಿಕೊಂಡಿರುವುದರ ಸಂಕೇತ ಇದು ಎಂದು ಹೇಳಬಹುದು.
ಶಾಸಕ ಪಿ. ಅಪ್ಪಾಗೌಡ ಪಾಟೀಲರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸೆ.30ರಂದು ನಡೆದ ಉಪ ಚುನಾವಣೆಯ ಮತಗಳ ಎಣಿಕೆ ಕಾರ್ಯ ಮಂಗಳವಾರ ಬೆಳಗ್ಗೆ ಆರಂಭಗೊಂಡಿತು. ಮೊದಲ ಬಾರಿಗೆ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಸಿದ ಪರಿಣಾಮವಾಗಿ ಮತ ಎಣಿಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬಿತ್ತು. ಉಪ ಚುನಾವಣೆಯಲ್ಲಿ ಶೇ. 65ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.