‘ಇಂಥವ ನಮ್ಮ (ಕ್ರಿಶ್ಚಿಯನ್ನರ) ಪ್ರತಿನಿಧಿಯೇ?’
‘ದೇಶದಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯಗಳಾದಾಗ ತನ್ನ ಸಮುದಾಯದವರ ಅಳಲಿಗೆ ಸ್ಪಂದಿಸದೆ, ಸರ್ಕಾರದ ತಲೆ ಸವರುವ ಪ್ರತಿನಿಧಿಯಂತೆ ವರ್ತಿಸಿದವರು ಜಾನ್ ಜೋಸೆಫ್. ಹಿಂದೊಮ್ಮೆ ಕ್ರಿಶ್ಚಿಯನ್ ಪಾದ್ರಿಯಾಬ್ಬರ ಮೇಲೆ ನಡೆದ ದಾಳಿಯನ್ನು ಅಪಘಾತ ಎಂದು ಸಾಬೀತು ಮಾಡಲು ಹೊರಟಿದ್ದವರು ಅವರು. ಅಂಥ ವ್ಯಕ್ತಿಯನ್ನು ಸಮಿತಿಯಲ್ಲಿನ ನಮ್ಮವ ಎಂದು ಹೇಗೆ ಕರೆಯೋಣ?’ ಎನ್ನುತ್ತಾರೆ ಅಖಿಲ ಭಾರತ ಕ್ರಿಶ್ಚಿಯನ್ ಸಮಿತಿಯ ವಿಭಾಗೀಯ ಸಂಚಾಲಕ ಆಲಿವರ್ ಡಿಸೋಜ.
ಕರ್ನಾಟಕ ಕ್ರಿಶ್ಚಿಯನ್ ದಲಿತರ ಒಕ್ಕೂಟವೂ ಜಾನ್ ಪ್ರಾತಿನಿಧ್ಯವನ್ನು ವಿರೋಧಿಸಿದೆ. ‘ಜಾನ್ ಜೋಸೆಫ್ ಅವರಿಂದ ಸಮುದಾಯ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸಮುದಾಯದ ಬಗೆಗೆ ಚಿಂತಿಸುವ ಅನೇಕರಿರುವಾಗ ಅವರನ್ನು ಈ ಕುರ್ಚಿಯ ಮೇಲೆ ಹೇಗೆ ಕೂರಿಸಲಾಯಿತೆಂಬುದೇ ತಿಳಿಯುತ್ತಿಲ್ಲ’ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ವೈ. ಮರಿಸ್ವಾಮಿ.
ಪ್ರತಿಭಟನೆಗೆ ತುದಿಗಾಲಲ್ಲಿ : ಜಾನ್ ಜೋಸೆಫ್ ಭಾಗವಹಿಸುವ ಸಮಾರಂಭಗಳಲ್ಲಿ ಅವರನ್ನು ವಿರೋಧಿಸಲು ರಾಜ್ಯದ ಕ್ರಿಶ್ಚಿಯನ್ ಸಂಘ- ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನ ಅವರ ವಿರುದ್ಧ ಸೊಲ್ಲೆತ್ತಿದರೂ ರಾಜ್ ಅಪಹರಣದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಪ್ರತಿಭಟನೆ ಯಶಸ್ವಿಯಾಗಲಿಲ್ಲ.
‘ಯಾವುದೇ ಕ್ರಿಶ್ಚಿಯನ್ ಸಂಘಟನೆಗಳ ಕಳಕಳಿಗೆ ಸ್ಪಂದಿಸದ ವ್ಯಕ್ತಿ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿನಿಧಿಯಾಗಲು ಅರ್ಹನಲ್ಲ. ಆತನನ್ನು ಕ್ರಿಶ್ಚಿಯನ್ ಸಮುದಾಯದ ವಕ್ತಾರ ಎಂದು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬುದು ಡಿಸೋಜ ಪಟ್ಟು.
(ಐಎಎನ್ಎಸ್)
ಮುಖಪುಟ / ಇವತ್ತು... ಈ ಹೊತ್ತು...