ಗೋಪಾಲ್ ಜತೆ ವೇಣುಗೋಪಾಲ್ರನ್ನೂ ಕಳುಹಿಸಲು ಸಲಹೆ
ಬೆಂಗಳೂರು : ಗೋಪಾಲ್ ಜತೆ ವಕೀಲ ವೇಣುಗೋಪಾಲ್ ಅವರನ್ನೂ ಸಂಧಾನಕ್ಕೆ ಕಳುಹಿಸುವಂತೆ ಹಾಗೂ ಟಾಡಾ ಮೊಕದ್ದಮೆ ವಾಪಸು ಪಡೆಯುವ ಅಧಿಕಾರ ರಾಜ್ಯ ಸರಕಾರಗಳಿಗೇ ನೀಡುವಂತೆ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರಕ್ಕೆ ಒತ್ತಾಯಿಸುವ ಸಲಹೆಗಳು ಮಂಗಳವಾರ ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಮೂಡಿಬಂದವು.
ರಾಜ್ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಸಂಧಾನದ ಮಾರ್ಗವನ್ನೇ ಅನುಸರಿಸಬೇಕು. ಆದರೆ, ಗೋಪಾಲ್ ಜತೆ ಕರ್ನಾಟಕದ ಪ್ರತಿನಿಧಿಯೂ ಇರಬೇಕು. ಆ ಪ್ರತಿನಿಧಿ ವೇಣುಗೋಪಾಲ್ ಆಗಲಿ ಎಂಬ ಸಲಹೆ ಪ್ರತಿಪಕ್ಷ ನಾಯಕರಿಂದ ಬಂತು. ಸಂಧಾನದ ಹೊರತಾಗಿ ಪರ್ಯಾಯ ಮಾರ್ಗದ ಸಲಹೆ - ಸೂಚನೆಗಳೂ ಸಭೆಯಲ್ಲಿ ಮೊಳಗಿದವು.
ರಾಜ್ ಅಪಹರಣವಾದ ದಿನದಿಂದಲೂ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರ್ವ ಪಕ್ಷ ಸಭೆಗಳನ್ನು ಕರೆಯುತ್ತಲೇ ಇದ್ದಾರೆ. ವಿಪಕ್ಷಗಳ ನಾಯಕರು ತಮ್ಮ ಅಭಿಪ್ರಾಯ, ಸಲಹೆ ನೀಡುತ್ತಲೇ ಇದ್ದಾರೆ. ಮಂಗಳವಾರದ ಸಭೆಯಲ್ಲೂ ಸಲಹೆಗಳು ಮೂಡಿವೆ. ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತವೆ ಎಂಬುದನ್ನು ರಜತ ಪರದೆಯ ಮೇಲೇ ನೋಡಬೇಕು.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷದ ನಾಯಕರುಗಳಾದ ಜಗದೀಶ ಶೆಟ್ಟರ್, ಬಸವರಾಜ ಸೇಡಂ, ಎಂ.ಪಿ. ಪ್ರಕಾಶ್, ಎಂ.ಸಿ. ನಾಣಯ್ಯ, ಸಿದ್ಧರಾಮಯ್ಯ, ಕೆ.ಎಚ್. ಶ್ರೀನಿವಾಸ್, ಶಂಕರಮೂರ್ತಿ, ಚೆನ್ನಿಗಪ್ಪ, ಬೈರೇಗೌಡ, ಪಿ.ಜಿ.ಆರ್. ಸಿಂಧ್ಯಾ ಅವರು ಈ ಸಭೆಯಲ್ಲಿ ರಾಜ್ ಬಿಡುಗಡೆ ಪ್ರಕ್ರಿಯೆಯ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು.
ಅ.11ರ ನಂತರ ಸಂಧಾನ ಯಾತ್ರೆ : ಟಾಡಾ ಬಂದಿಗಳ ಬಿಡುಗಡೆ ಸಂಬಂಧ ಸರ್ವೋನ್ನತ ನ್ಯಾಯಾಲಯ ಅಕ್ಟೋಬರ್ 11ರಂದು ವಿಚಾರಣೆ ನಡೆಸಲಿರುವ ಹಿನ್ನೆಲೆಯಲ್ಲಿ ಆನಂತರವೇ ಮತ್ತೊಂದು ಸಂಧಾನ ಯಾತ್ರೆಯ ಬಗ್ಗೆ ಚಿಂತಿಸಬೇಕು. ತಮಿಳುನಾಡು ಸರಕಾರದ ಮೇಲೆ ರಾಜ್ ಬಿಡುಗಡೆ ಪ್ರಕ್ರಿಯೆ ಚುರುಕುಗೊಳಿಸಲು ಒತ್ತಡ ಹೇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಂಸದರೊಂದಿಗೂ ಚರ್ಚೆ : ಈಗ ರಾಜ್ಯವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರೊಂದಿಗೆ ಕೂಡ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸುತ್ತಿದ್ದು, ಈ ಸಭೆಯ ನಂತರ ರಾಜ್ಕುಮಾರ್ ಬಿಡುಗಡೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ನಿರ್ಧಾರ ಹೊರಬೀಳಲಿದೆ.
ಮುಖಪುಟ / ರಾಜ್ ಅಪಹರಣ