ಆರೋಗ್ಯ ತಪಾಸಣೆಗೆ ಮಲ್ಯ ಆಸ್ಪತ್ರೆಗೆ ನಾಗಪ್ಪ
ಬೆಂಗಳೂರು :ಬುಧವಾರ ರಾತ್ರಿ ಕಾಡಿನಿಂದ ಕಂಬಿಕಿತ್ತು, ನಾಡು ಸೇರಿದ ನಾಗಪ್ಪ ಕೊನೆಗೂ ಬೆಂಗಳೂರು ತಲುಪಿದ್ದಾರೆ. ಚಾಮರಾಜನಗರದಿಂದ ಬೆಂಗಳೂರಿಗೆ ಬಂದ ನಾಗಪ್ಪ ಅವರು, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಪಾರ್ವತಮ್ಮ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆನಂತರ ಆರೋಗ್ಯ ತಪಾಸಣೆಗಾಗಿ ನಾಗಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪಾರ್ವತಮ್ಮ ಆಸ್ಪತ್ರೆಯಿಂದ ಮನೆಗೆ : ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾರ್ವತಮ್ಮ ರಾಜ್ಕುಮಾರ್ ಅವರು, ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ನಾಗಪ್ಪ ಅವರು ಸದಾಶಿವ ನಗರದ ರಾಜ್ಕುಮಾರ್ ಅವರ ಮನೆಯಲ್ಲೇ ಪಾರ್ವತಮ್ಮ ಅವರನ್ನು ಭೇಟಿ ಮಾಡಿ ತಾವು ಕಾಡಿನಿಂದ ಬಂದ ಸಾಹಸ ಹಾಗೂ ರಾಜ್ಕುಮಾರ್ ಅವರ ಯೋಗಕ್ಷೇಮದ ಬಗ್ಗೆ ವಿವರಿಸಿದರು.
ಪತ್ರಿಕಾಗೋಷ್ಠಿಯಿಂದ ಹೊರನಡೆದ ಕೃಷ್ಣ : ಈ ಮಧ್ಯೆ ನಾಗಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯಾಂದರಿಂದ ಕೆರಳಿದ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿ, ಹೊರ ನಡೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಾಗಪ್ಪ ತಾವು ವೀರಪ್ಪನ್ ವಶದಿಂದ ತಪ್ಪಿಸಿಕೊಂಡು ಬಂದುದಾಗಿ ಹೇಳಿದ್ದಾರೆ.
ಬುಧವಾರ ರಾತ್ರಿ ಎಲ್ಲರೂ ಮಲಗಿದ್ದಾಗ, ತಾವು ಹೋರಳುತ್ತಾ (ಉರುಳು ಸೇವೆ) ವೀರಪ್ಪನ್ ಬಿಡಾರದಿಂದ ಬಹುದೂರ ಹೋಗಿ ಓಡಿ ಬಂದುದಾಗಿ ಹೇಳಿದ್ದಾರೆ. ಅವರ ತಲೆ ಹಾಗೂ ಹಲ್ಲಿಗೆ ಪೆಟ್ಟೂ ಬಿದ್ದಿದೆ.
ಸಂಧಾನದ ಮೇಲೆ ಪರಿಣಾಮ ಇಲ್ಲ - ಕರುಣಾನಿಧಿ : ನಾಗಪ್ಪ ಅವರು ವೀರಪ್ಪನ್ ಕಣ್ಣುತಪ್ಪಿಸಿ ಓಡಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ ಬಿಡುಗಡೆ ಪ್ರಕ್ರಿಯೆಯ ಸಂಧಾನದ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು, ಗೋಪಾಲ್ ಅವರ ಈ ಬಾರಿಯ ಸಂಧಾನ ಯಾತ್ರೆ ಯಶಸ್ವಿಯಾಗೇ ಆಗುತ್ತದೆ. ರಾಜ್ಕುಮಾರ್ ಹಾಗೂ ಉಳಿದಿಬ್ಬರ ಬಿಡುಗಡೆ ಇಂದೋ, ನಾಳೆಯೋ ಆಗುತ್ತದೆ ಎಂದು ಹೇಳಿದ್ದಾರೆ.
ಮುಖಪುಟ / ರಾಜ್ ಅಪಹರಣ