ಮೈಸೂರು ತಾತಾಚಾರ್ಗೆ ರಾಜ.್ಯ ಸಂಗೀತ ವಿದ್ವಾನ್ ಪ್ರಶಸ್ತಿ
ಬೆಂಗಳೂರು : ಹೆಸರಾಂತ ಪಿಟೀಲು ವಾದಕ ಟಿ.ಎಸ್. ತಾತಾಚಾರ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಘೋಷಿಸಿದೆ.
ತಾತಾಚಾರ್ ಅವರ ಶೇಷ ಜೀವನ ಪೂರ್ತಿ ಪ್ರತಿ ತಿಂಗಳು ಒಂದು ಸಾವಿರ ರುಪಾಯಿಯನ್ನು ಪ್ರಶಸ್ತಿ ರೂಪದಲ್ಲಿ ಸರ್ಕಾರ ಸಂದಾಯ ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅ.ರಾ. ಚಂದ್ರಹಾಸ ಗುಪ್ತ ಶುಕ್ರವಾರ ಮೈಸೂರಿನಲ್ಲಿ ಘೋಷಿಸಿದರು.
ಸಂಗೀತ ಸಾಧನೆಯಿಂದ ಅನೇಕ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿರುವ ತಾತಾಚಾರ್ ಟೈಗರ್ ವರದಾಚಾರ್, ಮೈಸೂರು ವಾಸುದೇವಾಚಾರ್, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಡಾ. ಸೆಮ್ಮಣ್ಣುಗುಡಿ ಶ್ರೀನಿವಾಸ ಅಯ್ಯರ್ ಹಾಗೂ ಟಿ.ಆರ್. ಮಹಾಲಿಂಗಮ್ರಂಥವರ ಸಂಗೀತಕ್ಕೆ ಪಿಟೀಲು ಸಾಥ್ ನೀಡಿದ್ದಾರೆ. ಪಿಟೀಲು ಚೌಡಯ್ಯ, ದ್ವಾರಂ ವೆಂಕಟಸ್ವಾಮಿ ನಾಯ್ಡು ಹಾಗೂ ಅವರ ಮಗ ಟಿ. ಶ್ರೀನಿವಾಸನ್ ಜೊತೆ ಜಂಟಿ ವಾದ್ಯ ಗೋಷ್ಠಿಗಳನ್ನು ಪ್ರದರ್ಶಿಸಿದ್ದಾರೆ.
ಮೈಸೂರು ತಾತಾಚಾರ್ ಎಂದೇ ಪ್ರಸಿದ್ಧರಾಗಿರುವ ಈ ಪಿಟೀಲು ಮಾಂತ್ರಿಕ, ಒಡೆಯರ್ ಆಸ್ಥಾನದಲ್ಲಿ ಅನೇಕ ಕಚೇರಿಗಳನ್ನು ನಡೆಸಿದ್ದಾರೆ. ಸಂಗೀತಾಸಾಕ್ತ ದಿಗ್ಗಜಗಳು ಇವರ ಕಚೇರಿಯನ್ನು ತಪ್ಪದೇ ವೀಕ್ಷಿಸುತ್ತಿದ್ದರು. ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಸರ್ ಸಿ.ವಿ. ರಾಮನ್ ಅನೇಕ ವರ್ಷಗಳ ಕಾಲ ವಾರಕ್ಕೆ 2 ಬಾರಿಯಾದರೂ ತಾತಾಚಾರ್ ಪಿಟೀಲು ವಾದನ ಕೇಳುತ್ತಿದ್ದರಂತೆ.
(ಯುಎನ್ಐ)