ಬಂದ್ ಕೈಬಿಡಲು ಚಿತ್ರೋದ್ಯಮಿಗಳಿಗೆ ಸಾಹಿತಿಗಳ ಮನವಿ
ಹುಬ್ಬಳ್ಳಿ : ವೀರಪ್ಪನ್ ಒತ್ತೆಯಲ್ಲಿರುವ ಡಾ. ರಾಜ್ಕುಮಾರ್ ಹಾಗೂ ಇತರ ಮೂವರ ಶೀಘ್ರ ಬಿಡುಗಡೆಗೆ ಒತ್ತಾಯಿಸಿ 28ರಂದು ನಡೆಸಲುದ್ದೇಶಿಸಿರುವ ಕರ್ನಾಟಕ ಬಂದ್ನ್ನು ಕೈಬಿಡುವಂತೆ ಧಾರವಾಡದ ಸಾಹಿತಿ - ಕಲಾವಿದರು ಚಿತ್ರೋದ್ಯಮಿಗಳು ಹಾಗೂ ರಾಜ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ರಾಜ್ಯ ಸರಕಾರ ರಾಜ್ಕುಮಾರ್ ಅವರ ಬಿಡುಗಡೆಗೆ ಶಕ್ತಿ ಮೀರಿ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ ಅವರನ್ನು ಬಿಡಿಸಲು ವೀರಪ್ಪನ್ನ ಅನುಚಿತ ಬೇಡಿಕೆಗಳನ್ನೂ ಈಡೇರಿಸಲು ಸಿದ್ಧವಾಗಿದೆ ಹೀಗಿದ್ದೂ ಕೂಡ ಬಂದ್ ಆಚರಿಸುವುದು ಸೂಕ್ತವಲ್ಲ ಎಂದು ಸಾಹಿತಿ - ಕಲಾವಿದರ ಪರವಾಗಿ ಕನ್ನಡ ಕಾವಲು ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತ ಪಾಟೀಲ ಪುಟ್ಟಪ್ಪ ಮತ್ತಿತರರು ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಂದ್ನಂತಹ ಕ್ರಮಗಳು ರಾಜ್ ಬಿಡುಗಡೆಯ ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆಯೇ ಹೊರತು, ಇದರಿಂದ ಒಳಿತಾಗುವುದಿಲ್ಲ. ಬಂದ್ ಕಾಲದಲ್ಲಿ ಹಿಂಸಾಚಾರ ನಡೆದರೆ, ಅದು ಭಾಷಾ ಅಲ್ಪಸಂಖ್ಯಾತರ ವಿರುದ್ಧ ತಿರುಗುವ ಸಾಧ್ಯತೆಗಳೂ ಇವೆ. ಮಿಗಿಲಾಗಿ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯಲು ಹೊಂಚು ಹಾಕುತ್ತಾರೆ. ಹೀಗಾಗಿ ಬಂದ್ ನಿರ್ಧಾರವನ್ನು ಕೈಬಿಡುವಂತೆ ಅವರು ಪ್ರಾರ್ಥಿಸಿದ್ದಾರೆ.
ಕೇಂದ್ರ ಏನು ಮಾಡಬೇಕು ? : ಕೇಂದ್ರ ಸರಕಾರ ರಾಜ್ ಬಿಡುಗಡೆಗೆ ಮುಂದಾಗಬೇಕು ಎಂದು ಆಗ್ರಹಿಸಿ ಬಂದ್ ಆಚರಿಸಲಾಗುತ್ತಿದೆ. ಕೇಂದ್ರ ವೀರಪ್ಪನ್ ವಿರುದ್ಧ ಬಲಪ್ರಯೋಗ ಮಾಡಬೇಕೆ? ಬಲಪ್ರಯೋಗದಿಂದ ರಾಜ್ ಅವರಿಗೂ ತೊಂದರೆ ಆಗುವುದಿಲ್ಲವೇ? ಈಗ ಸಂಧಾನವೊಂದೇ ಸೂಕ್ತ ಮಾರ್ಗ ಹೀಗಾಗಿ ಬಂದ್ ಕೈಬಿಡುವುದೇ ಸೂಕ್ತ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಹಿತಿ ಕಲಾವಿದರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್, ಡಾ. ಎಂ.ಎಸ್. ವೃಷಭೇಂದ್ರ ಸ್ವಾಮಿ, ಪ್ರೊ. ಕೆ.ಎಸ್. ದೇಶಪಾಂಡೆ, ಡಾ. ಆರ್. ಬಿ. ಪಾಟೀಲ್, ನೀಲಗಂಗಯ್ಯ ಸೇರಿದಂತೆ ಸುಮಾರು 25 ಮಂದಿ ಸಹಿ ಹಾಕಿದ್ದಾರೆ.
(ಹುಬ್ಬಳ್ಳಿ ಪ್ರತಿನಿಧಿಯಿಂದ)