ಪ್ರವಾಸ ಒಳ್ಳೆ ಮೇಷ್ಟ್ರಿದ್ದ ಹಾಗೆ, ಆದರೆ ತರಗತಿಗಳು ಬಂದಾಗಿವೆ
ಕರ್ನಾಟಕದಲ್ಲಿ ಈ ಬಾರಿ ಸೊಗಸಾಗಿ ಮಳೆಯಾಗಿರುವ ಕಾರಣ ಜಲಾಶಯಗಳೆಲ್ಲಾ ತುಂಬಿವೆ. ನದಿಗಳು ಮೈದುಂಬಿ ಹರಿಯುತ್ತಿದೆ. ಜಲಪಾತಗಳು ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿವೆ. ಈ ರುದ್ರ ರಮಣೀಯ ದೃಶ್ಯವನ್ನು ಕಣ್ಣಾರೆ ಕಾಣುವ ತವಕ ಪ್ರವಾಸಿಗರಿಗಿದ್ದರೂ, ರಾಜ್ಯದ ಪರಿಸ್ಥಿತಿ ಅವರ ಎದೆಯಲ್ಲಿ ಅಳುಕು ತಂದಿದೆ. ಜೋಗದ ಸಿರಿಯ ನೋಡುವ ಬಯಕೆಗೆ ಕಡಿವಾಣ ಬಿದ್ದಿದೆ.
ಮುಖ್ಯವಾಗಿ ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗೆ ರಾಜ್ಯದ ಪಕ್ಷಿಧಾಮಗಳಲ್ಲೂ ತರಹೇವಾರಿ ನಮೂನೆಯ ಜಾತಿಯ ಪಕ್ಷಿಗಳು ವಲಸೆ ಬರುವ ಕಾರಣ ಪ್ರವಾಸಿಗರು, ಈ ಸಮಯವನ್ನೇ ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಈ ವರ್ಷ ಉತ್ತರ ಭಾರತದಲ್ಲೇ ಉಳಿದಿರುವ ವಿದೇಶೀ ಪ್ರವಾಸಿಗರು, ದಕ್ಷಿಣ ಭಾರತಕ್ಕೆ ಬಂದರೂ ಕರ್ನಾಟಕ ಪ್ರವಾಸ ಕಾರ್ಯಕ್ರಮ ರದ್ದು ಪಡಿಸುತ್ತಿದ್ದಾರೆ ಎಂಬ ವರದಿಗಳಿವೆ.
ಇದರಿಂದಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಕೋಟ್ಯಂತರ ರುಪಾಯಿಗಳ ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇಲಾಖೆಯ ಹಿರಿಯ ಅಧಿಕಾರಿ. ಮೈಸೂರು ನಗರದಲ್ಲಂತೂ ದಸರೆಗೆ 48 ಗಂಟೆಗಳಷ್ಟೇ ಉಳಿದಿದ್ದರೂ ಪ್ರವಾಸಿಗರ ಸಂಭ್ರಮ ಕಾಣುತ್ತಿಲ್ಲ. ದಸರೆಯ ಸಂದರ್ಭದಲ್ಲಿ ಡಬಲ್ ರೂಂ ರೆಂಟ್ ಕೊಡುತ್ತೇವೆಂದರೂ ದೊರಕದಿದ್ದ ಹೊಟೆಲ್ ರೂಂಗಳು ಈ ಬಾರಿ ಖಾಲಿ ಹೊಡೆಯುತ್ತಿವೆ. ರಾಜ್ ಅಪಹರಣಾ ನಂತರ ರದ್ದಾದ, ರಾಜ್ಯಕ್ಕೆ ಉಂಟಾದ ನಷ್ಟಗಳ ಪಟ್ಟಿಯಲ್ಲಿ ವಿಶ್ವ ಪ್ರವಾಸ ದಿನವೂ ಮತ್ತೊಂದು ಸೇರ್ಪಡೆ.
ಮುಖಪುಟ / ನೋಡು ಬಾ ನಮ್ಮೂರ