ರೈಲ್ವೇ ಯೋಜನೆ ಅಭಿವೃದ್ಧಿಗೆ ಕೇಂದ್ರ --- ರಾಜ್ಯದ ಜಂಟಿ ಸಹಯೋಗ
ಬೆಂಗಳೂರು :ಕರ್ನಾಟಕ ಹಾಗೂ ಭಾರತೀಯ ರೈಲ್ವೆಯ ಜಂಟಿ ಸಹಯೋಗದಲ್ಲಿ ಕೆ. ರೈಡ್ ಎಂಬ ಕಂಪನಿಯನ್ನು ಇನ್ನು ಎರಡು ತಿಂಗಳಲ್ಲಿ ನೋಂದಾಯಿಸಲಾಗುವುದು. ಇದು ಇನ್ನಾರು ತಿಂಗಳಲ್ಲಿ ಕಾರ್ಯಾರಂಭಿಸಲಿದೆ. ಈ ವಿಷಯವನ್ನು ಮೂಲ ಸೌಕರ್ಯಗಳ ಅಭಿವೃದ್ಧಿ ಖಾತೆ ಸಚಿವ ಟಿ. ಜಾನ್ ಶನಿವಾರ ಇಲ್ಲಿ ತಿಳಿಸಿದ್ದಾರೆ.
ಈ ಕಂಪನಿಯನ್ನು 60ಕೋಟಿ ರುಪಾಯಿ ಷೇರು ಬಂಡವಾಳದೊಂದಿಗೆ ಆರಂಭಿಸಲಾಗುವುದು. ಹೆಚ್ಚಿನ ಹಣಕಾಸಿಗಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನೆರವು ಪಡೆದು ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಕಂಪನಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ತಲಾ 26ರಷ್ಟು ಷೇರು ಬಂಡವಾಳ ಹೂಡಲಿವೆ.
ಸಂಪನ್ಮೂಲಗಳ ಪುನರ್ ಕ್ರೂಡೀಕರಣದೊಂದಿಗೆ ಪ್ರಾರಂಭದಲ್ಲಿ 991.91 ಕೋಟಿ ರುಪಾಯಿ ವೆಚ್ಚದ ಹುಬ್ಬಳ್ಳಿ-ಅಂಕೋಲಾ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಇಷ್ಟಲ್ಲದೆ 164 ಕೋಟಿ ರು. ವೆಚ್ಚದ ಗುಂತ್ಕಲ್-ಹೊಸಪೇಟೆ ಜೊಡಿ ಹಳಿ ಯೋಜನೆ, 473.59 ಕೋಟಿ ರು. ವೆಚ್ಚದ ಸೊಲ್ಲಾಪುರ-ಗದಗ ಮಾರ್ಗದ ಬ್ರಾಡ್ಗೇಜ್ ಪರಿವರ್ತನಾ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಿದೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸರಕಾರ ಒಂದೆರಡು ವಾರಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಟೆಂಡರ್ದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪರಿಸರ ಇಲಾಖೆ ಪ್ರಮಾಣ ಪತ್ರ ಪಡೆಯಲು ಎಲ್ಲ ಕ್ರಮಗಳನ್ನೂ ತ್ವರಿತಗೊಳಿಸಿದೆ ಎಂದು ಸಚಿವರು ತಿಳಿಸಿದ್ದಾರೆ.