ಮಾನವರಹಿತ ಸ್ಥಾವರವಾಗಲಿರುವ ಕೊಡಸಳ್ಳಿ ಜಲವಿದ್ಯುತ್ ಯೋಜನೆ
ಕಾರವಾರ: ಕೊಡಸಳ್ಳಿಯ ಎರಡನೇ ಹಂತದ ಜಲವಿದ್ಯುತ್ ಸ್ಥಾವರವನ್ನು ಮಾನವರಹಿತ ವಿದ್ಯುತ್ ಸ್ಥಾವರವಾಗಿ ಅಭಿವೃದ್ದಿಪಡಿಸಲಾಗುವುದೆಂದು ರಾಜ್ಯ ವಿದ್ಯುತ್ ನಿಗಮದ ನಿರ್ದೇಶಕ ಕೆ. ಸಂಕಪ್ಪಶೆಟ್ಟಿ ಹೇಳಿದ್ದಾರೆ.
ಯೋಜನಾಪ್ರದೇಶಕ್ಕೆ ಗುರುವಾರ ಭೇಟಿ ನಿಡಿದ್ದ ಅವರು ಸ್ಥಾವರವನ್ನು ಕಂಪ್ಯೂಟರೀಕರಿಸಿ, ಕಾಳಿನದಿ ಎರಡನೇ ಹಂತದಲ್ಲಿ ಮೇಲ್ಬಾಗದಲ್ಲಿ ಬರುವ ನಾಗಝರಿ ವಿದ್ಯುತ್ ಯೋಜನೆ ಹಾಗೂ ಕೆಳಭಾಗದಲ್ಲಿ ಬರುವ ಕದ್ರಾ ವಿದ್ಯುತ್ ಸ್ಥಾವರಗಳಿಂದ ನಿಯಂತ್ರಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇರುವ ವಿದ್ಯುತ್ ಸ್ಥಾವರಗಳ ಉತ್ಪಾದನಾ ಸಾಮರ್ಥ್ಯವನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸುವಲ್ಲಿ ಜಲವಿದ್ಯುತ್ ಮೂಲಗಳನ್ನೇ ನಂಬಿಕೊಂಡರೆ ಸಾಧ್ಯವಾಗುವುದಿಲ್ಲ. ಈ ನಡುವೆ ಮುಳಗಡೆ ಹಾಗೂ ಪುನರ್ವಸತಿ ಕಾರಣಗಳಿಂದ ಜಲವಿದ್ಯುತ್ ಯೋಜನೆಗಳಿಗೆ ವಿರೋಧ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ಜಲ ಮೂಲಗಳನ್ನು ಬಳಸಿಕೊಳ್ಳುವಲ್ಲಿ ತೊಡಕಾಗುತ್ತಿದೆ ಎಂದು ಸಂಕಪ್ಪ ಹೇಳಿದ್ದಾರೆ.