ತೆರಿಗೆ ಸುಧಾರಣೆ ಆಯೋಗದ ವೆಬ್ಸೈಟ್ ಉದ್ಘಾಟನೆ
ಬೆಂಗಳೂರು : ಕೃಷ್ಣ ಮುಖ್ಯಮಂತ್ರಿ ಆದ ಮೇಲೆ ಮಾಜಿ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರಿಗೂ ವೆಬ್ಸೈಟ್ - ಇಂಟರ್ನೆಟ್ ಮಹತ್ವ ಏನು ಎಂಬುದು ಅರ್ಥ ಆಗಿದೆ. ಎಲ್ಲ ಇಲಾಖೆಗಳೂ ಇಂಟರ್ನೆಟ್ ಉಪಯೋಗ ಪಡೆಯಲು ನಾ ಮುಂದು, ತಾ ಮುಂದು ಎಂದು ಮುನ್ನುಗ್ಗುತ್ತಿವೆ.
ಈಗ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೂ ಇದರ ಮಹತ್ವ ಅರಿವಾಗಿದೆ. ಅದಕ್ಕಾಗಿ ಅವರು ರಾಜ್ಯದ ತೆರಿಗೆ ಸುಧಾರಣೆಗೆ ಪೂರಕವಾದ ವೆಬ್ ಸೈಟನ್ನು ರಾಜ್ಯ ತೆರಿಗೆ ಆಯೋಗದ ವತಿಯಿಂದ ತಮ್ಮ ಕಚೇರಿಯಲ್ಲಿ ಶುಕ್ರವಾರ ಆರಂಭಿಸಿದ್ದಾರೆ.
ಈ ಸೈಟನ್ನು ಸ್ವತಃ ಉದ್ಘಾಟಿಸಿದ ಮೊಯ್ಲಿ ಅವರು, ಸಾರ್ವಜನಿಕರು ತೆರಿಗೆ ಸುಧಾರಣೆ ಬಗ್ಗೆ ಈ ಸೈಟ್ ಮೂಲಕ ಸಲಹೆ - ಸೂಚನೆಗಳನ್ನು ನೀಡಬಹುದು ಎಂದೂ ತಿಳಿಸಿದ್ದಾರೆ. ಇದಕ್ಕೆ ಅಕ್ಟೋಬರ್ 15 ಗಡುವನ್ನೂ ವಿಧಿಸಿದ್ದಾರೆ. ಈ ಮುನ್ನ ಸಾರ್ವಜನಿಕರ ಸಲಹೆಗೆ ಇದ್ದ ಗಡುವು ಸೆ. 30 ಆಗಿತ್ತು.
ಸೈಟ್ ಹೊರತಾಗಿಯೂ ಸಲಹೆ ಸೂಚನೆಗಳನ್ನು ಪಡೆಯಲು ಅವರು ಮಡಿಕೇರಿ, ಗುಲ್ಪರ್ಗಾ ನಗರಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆಯೋಗ ತನ್ನ ಪ್ರಥಮ ವರದಿಯನ್ನು ಈ ವರ್ಷಾಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಲಿದೆ ಎಂದೂ ಹೇಳಿದ್ದಾರೆ. ಅಂದಹಾಗೆ ವೆಬ್ ಸೈಟ್ ವಿಳಾಸ ಏನು ಗೊತ್ತೆ : http://kar.nic.in/trc