ಶಾಂತಿ ಭಂಗ, ಬಂದ್ ನಡೆಸದಂತೆ ಅಭಿಮಾನಿಗಳಿಗೆ ಖರ್ಗೆ ಮನವಿ
ಬೆಂಗಳೂರು :ಇಷ್ಟು ದಿನ ಶಾಂತಿಯಿಂದ ವರ್ತಿಸಿದ್ದೀರಿ. ಇನ್ನು ಕೆಲವೇ ದಿನದಲ್ಲಿ ರಾಜ್ಕುಮಾರ್ ಹಾಗೂ ಮತ್ತಿತರ ಮೂವರ ಬಿಡುಗಡೆ ಆಗುತ್ತದೆ ಅಲ್ಲಿಯವರೆಗೆ ಶಾಂತಿ ಕಾಪಾಡಿ ಎಂದು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಡಾ. ರಾಜ್ಕುಮಾರ್ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ರಾಜ್ಕುಮಾರ್ ಅವರ ಬಿಡುಗಡೆಗೆ ಒತ್ತಾಯಿಸಿ ಬಂದ್ಗೆ ಕರೆ ನೀಡುವುದು, ಪ್ರತಿಭಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಕೈಬಿಡಬೇಕೆಂದು ಮನವಿ ಮಾಡಿರುವ ಖರ್ಗೆ ಅವರು ಇಂತಹ ನಿರ್ಧಾರಗಳು ರಾಜ್ ಬಿಡುಗಡೆಗೆ ಸಹಕಾರಿಯಾಗದು ಎಂದು ತಿಳಿಸಿದ್ದಾರೆ.
ಬಂದ್, ಪ್ರತಿಭಟನೆಯಂತಹ ಮಾರ್ಗಗಳು ರಾಜ್ ಅವರ ಬಿಡುಗಡೆಗೆ ಸಹಕಾರಿಯಾಗುವುದಕ್ಕಿಂತಲೂ ಅವರಿಗೆ ಅಪಾಯ ತರುವ ಸಾಧ್ಯತೆಗಳೇ ಹೆಚ್ಚಾಗಿರುವ ಕಾರಣ ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರದೊಂದಿಗೆ ಸಹಕರಿಸುವಂತೆ ಅವರು ಕೋರಿದರು. ನಾವೆಲ್ಲ ಶಾಂತಿಯಿಂದ ವರ್ತಿಸಿದರೆ ಅಪಹರಣ ಪ್ರಕರಣ ಸುಖಾಂತ್ಯವಾಗಿ ಕೊನೆಗೊಳ್ಳುತ್ತದೆ ಎಂದೂ ಅವರು ಹೇಳಿದರು.
ಗೋಪಾಲ್ ಅವರು ಬುಧವಾರ ರಾತ್ರಿ ಕಾಡಿಗೆ ತೆರಳಲಿದ್ದಾರೆ. ವೀರಪ್ಪನ್ ಅವರ ಮನವೊಲಿಸಿ ರಾಜ್ಕುಮಾರ್ ಅವರನ್ನು ಕರೆದುಕೊಂಡು ಬರುತ್ತಾರೆ. ಈಗ ಸಂಧಾನದ ಹೊರತಾಗಿ ಅನ್ಯ ಮಾರ್ಗ ಸೂಕ್ತವಲ್ಲ ಎಂದು ಅವರು ಹೇಳಿದರು.