ನಾಲ್ಕನೇ ಬಾರಿ ಸಂಧಾನಕ್ಕಾಗಿ ಕಾಡಿಗೆ ಹೊರಟ ಗೋಪಾಲ್
ಚೆನ್ನೈ : ಕರುಣಾನಿಧಿ ಅವರ ಒತ್ತಾಯಕ್ಕೆ ಮಣಿದ ನಕ್ಕೀರನ್ ಗೋಪಾಲ್ ಅವರು ಬುಧವಾರ ರಾತ್ರಿ ನಾಲ್ಕನೇ ಬಾರಿಗೆ ವೀರಪ್ಪನ್ ಅಡುಗುತಾಣದತ್ತ ಹೆಜ್ಜೆ ಹಾಕಿದರು.
ವೀರಪ್ಪನ್ ಷರತ್ತಿನಂತೆ ಮೈಸೂರು ಜೈಲಿನಲ್ಲಿರುವ ಟಾಡಾ ಬಂದಿಗಳನ್ನಾಗಲೀ ಅಥವಾ ತಮಿಳುನಾಡಿನ ಜೈಲಿನಲ್ಲಿರುವ ತಮಿಳು ಉಗ್ರರ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಗಳು ಆಗಿಲ್ಲದಿದ್ದಾಗ್ಯೂ ಕೂಡ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ವೀರಪ್ಪನ್ಗೆ ತಿಳಿಸಿ, ಆತನ ಮನವೊಲಿಸುವಂತೆ ಕರುಣಾನಿಧಿ ಅವರು ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ಗೋಪಾಲ್ ಒಲ್ಲದ ಮನಸ್ಸಿನಿಂದಲೇ ಕಾಡಿನತ್ತ ತೆರಳಿದ್ದಾರೆ.
ಕಳೆದ 53 ದಿನಗಳಿಂದ ಕನ್ನಡದ ಮೇರು ನಟ ರಾಜ್ಕುಮಾರ್ ಹಾಗೂ ಇತರ ಮೂವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ತಮಿಳು ಉಗ್ರರ ಹಾಗೂ ಟಾಡಾ ಬಂದಿಗಳ ಬಿಡುಗಡೆಗೆ ವೀರಪ್ಪನ್ ವಿಧಿಸಿದ್ದ ಷರತ್ತನ್ನು ಉಭಯ ರಾಜ್ಯಗಳು ಒಪ್ಪಿಕೊಂಡಿದ್ದವಾದರೂ, ಬಂದಿಗಳ ಬಿಡುಗಡೆಗೆ ಸರ್ವೋನ್ನತ ನ್ಯಾಯಾಲಯ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ರಾಜ್ಕುಮಾರ್ ಅವರ ಬಿಡುಗಡೆ ವಿಳಂಬವಾಗಿದೆ.
ವೀರಪ್ಪನ್ ಸಹಚರರಿಂದ ಹತರಾದ ಪೊಲೀಸ್ ಅಧಿಕಾರಿ ಶಖೀಲ್ ಅಹ್ಮದ್ ಅವರ ತಂದೆ ಅಬ್ದುಲ್ ಕರೀಂ ಅವರು ಸಲ್ಲಿಸಿರುವ ವಿಶೇಷ ತೆರವು ಅರ್ಜಿಯ ವಿಚಾರಣೆಯನ್ನು ಸರ್ವೋನ್ನತ ನ್ಯಾಯಾಲಯ ಅಕ್ಟೋಬರ್ 11ಕ್ಕೆ ಮುಂದೂಡಿದೆ. ಈ ಎಲ್ಲ ವಿದ್ಯಮಾನಗಳನ್ನೂ ವೀರಪ್ಪನ್ಗೆ ವಿವರಿಸಿ, ರಾಜ್ ಬಿಡುಗಡೆಗೆ ವೀರಪ್ಪನ್ ಮನವೊಲಿಸುವ ಸಲುವಾಗಿ ಗೋಪಾಲ್ ಎರಡೂ ರಾಜ್ಯಗಳ ಸಂಧಾನಕಾರರಾಗಿ ಇಂದು ಕಾಡಿಗೆ ಹೊರಟರು.