ಏನು ಮನಸು ಮಳೆಯದು ?
ಬೆಂಗಳೂರು : ಊರಿನಲ್ಲಿರುವಾಗ ಆಗಸ ನೋಡಿ ಮಳೆಯ ಮನಸ ಓದುತ್ತಿದ್ದ ಅಜ್ಜಿ , ಬೆಂಗಳೂರಿಗೆ ಬಂದು, ಮಗನ ಪ್ಲಾ ್ಯಟ್ನ ಬಾಲ್ಕನಿಯಲ್ಲಿ ಕಾಣುವ ಪುಟ್ಟ ಆಕಾಶವನ್ನು ದಿಟ್ಟಿಸುತ್ತಾಳೆ. ಆದರೆ ಮಳೆಯ ಮನಸ್ಸನ್ನು ಓದಲಾರಳು. ಇದು ಮಳೆ ತರುವ ಮೋಡವೋ, ಹೆಪ್ಪು ಗಟ್ಟಿದ ಹೊಗೆಯೋ ಎಂತು ಹೇಳುವುದು ? ರಾತ್ರಿ ಗಂಟೆ 12 ಕಳೆದರೂ ಬೆಂಗಳೂರಿನ ಆಕಾಶದಲ್ಲಿ ಚುಕ್ಕಿ ಮೂಡುವುದಿಲ್ಲ. ಕಳೆದ ಮೂರು ದಿನದಿಂದ ಬೆಂಗಳೂರು ಸಂಜೆಗಳೆಲ್ಲಾ ಮಳೆಯ ತೆಕ್ಕೆಯಲ್ಲಿ . ಏನು ಮನಸಾಯಿತೋ ಮಳೆಗೆ ತಿಳಿಯದು. ಬೆಂಗಳೂರಿಗೆ ಬಂದಿದೆ.
ಮುಂಜಾನೆ ಕಣ್ಣುಜ್ಜಿಕೊಂಡು ಕಿಟಕಿಯಲ್ಲಿ ಇಣುಕಿದರೆ ರಾತ್ರಿ ಚಿರಿಗುಟ್ಟಿದ ಮಳೆಯ ಪಿಟಿ ಪಿಟಿ ಹನಿಗಳು, ಮತ್ತೆ ಮುಸುಕೆಳೆದುಕೊಳ್ಳುವಂತೆ ಮಾಡುತ್ತವೆ. ಆದರೆ ಈ ಬೆಚ್ಚನೆ ಊರು, ಮಳೆ ಮತ್ತೆ ಈ ಅಜ್ಜಿಯ ನೆನಪುಗಳ್ಯಾವುದೂ ಕರ್ತವ್ಯಕ್ಕೆ ಬದಲಿಯಾಗವು. ಬೆಂಗಳೂರಿನಲ್ಲಿ ಶನಿವಾರ ಸಂಜೆ ಚಿಣ್ಣರು ರಸ್ತೆ ದಾಟಲಾಗದೆ, ಪೂಟ್ ಪಾತಿನಲ್ಲಿ ಮೊಣಕಾಲು ಮುಳುಗುವ ಕೆಂಪು ನೀರನ್ನೇ ನೋಡುತ್ತಾ ನಿಂತಿದ್ದರು. ಆಫೀಸಿನಲ್ಲಿ ಫೋನೆತ್ತಿಕೊಂಡವರೆಲ್ಲಾ ಅಲ್ಲಿ ಮಳೆ ಬಂತಾ ? ಎಂದು ಪ್ರಶ್ನಿಸುತ್ತಲೇ ಮಾತು ಆರಂಭಿಸುತ್ತಿದ್ದರು. ಇಲ್ಲಿ ಮಳೆ ಬಂದಿದೆ ನೋಡು ಎಂದೇ ಆ ಕಡೆಯವರು ಮಾತಿಗಿಳಿಯುತ್ತಿದ್ದರು.
ಭಾನುವಾರ ರಜೆ ತೆಗೆದುಕೊಳ್ಳದ ಮಳೆ ಹೊಸ ಕೋಟೆಯಲ್ಲಿ 8 ಸೆಂ. ಮೀ., ಬೆಂಗಳೂರು ವಿಮಾನ ನಿಲ್ದಾಣದಲ್ಲಿ 7 ಸೆಂಟಿ ಮೀಟರ್ ಸುರಿದಿದೆ. ಇಲ್ಲೆಲ್ಲಾ ಹರಿದಾಡುವ ಮಳೆಗೆ ಕರಾವಳಿಗೆ ಹೋಗಲು ಪುರುಸೊತ್ತಿಲ್ಲ. ಮತ್ತೆ ಕರ್ತವ್ಯ.... ಕರಾವಳಿಯಲ್ಲಿಯೇ ಉಳಿದು ಬಿಡುವುದೆಂದರೆ ಬೆಂಗಳೂರಿನವರು ಏನೆಂದು ಕೊಳ್ಳಲಿಕ್ಕಿಲ್ಲ ? ಕರಾವಳಿಯವರೆಲ್ಲಾ ದಸರೆಗೆ ಮುಂಚೆಯಂತೂ ಈ ಮಳೆ ಬಂದೇ ಬರುತ್ತದೆ ಎಂದು ಪ್ರೀತಿ, ಆಸೆಯಿಂದ ಪ್ರತಿ ಬೆಳಗೂ ತಮ್ಮದೇ ಅಂದಾಜಿನಲ್ಲಿ ದಿನ ಆರಂಭಿಸುತ್ತಾರೆ. ಆದರೆ ಹವಾಮಾನ ಇಲಾಖೆಯವರು ಇನ್ನೆರಡು ದಿನ ಈ ಮಳೆ ಕರಾವಳಿಯತ್ತ ಹೋಗುವ ಮನಸ್ಸು ತೋರಿಲ್ಲ ಎನ್ನುತ್ತಾರೆ. ಅವರು ಮಳೆಯ ಮನಸ್ಸು ಓದಿ ಬಿಟ್ಟಿದ್ದಾರಾ ?