ರಾಜ್ಯದ ಅಲ್ಲಲ್ಲಿ ಸುರಿದಿದೆ ಮಳೆ
ಬೆಂಗಳೂರು : ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಸಣ್ಣಗೆ ಮಳೆ ಸುರಿಯುತ್ತಿತ್ತು. ಮೋಡ ಕವಿದಿತ್ತು. ಅರಬ್ಬಿಯಲ್ಲೋ, ಬಂಗಾಳಕೊಲ್ಲಿಯಲ್ಲೋ ಭೂಭಾರ ಕುಸಿತ ಉಂಟಾಗಿರಬೇಕು ಎನ್ನುವಂತಹ ವಾತಾವರಣ. 10 ಗಂಟೆ ಕಳೆಯುವ ಹೊತ್ತಿಗೆ ಕೊಂಚ ಬಿಸಿಲು ಬಂತು. ಮಧ್ಯಾಹ್ನ ಬಿಸಿಲು ಪ್ರಖರವಾಗಿತ್ತು. ಸಣ್ಣಗೆ ಗಾಳಿಯೂ ಬೀಸುತ್ತಿತ್ತು. ಮಧ್ಯೆ ಮಧ್ಯೆ ತುಂತುರು ಮಳೆ ಹನಿಯ ಸಿಂಚನ. ಸಂಜೆ ಐದು ಗಂಟೆಯ ಹೊತ್ತಿಗೆ ಮೋಡವೆಲ್ಲ ಒಂದೆಡೆ ಸೇರಿ ಧಾರಾಕಾರವಾಗಿ ಮಳೆ ಸುರಿಯಿತು.
ರಾಜ್ಯದಲ್ಲಿ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಮಳೆ ಬಿದ್ದಿದೆ. ಕರಾವಳಿಯಲ್ಲಿ ಮುಂಗಾರು ದುರ್ಬಲವಾಗಿದೆ. ಆದರೂ, ಲಕ್ಷ್ಮೇಶ್ವರದಲ್ಲಿ 7 ಸೆಂ.ಮೀ, ಹರಪನಹಳ್ಳಿಯಲ್ಲಿ 6ಸೆಂ.ಮೀ, ಹೊನ್ನಾಳಿಯಲ್ಲಿ 5, ಹಿರೇಕೆರೂರಿನಲ್ಲಿ 4, ಸವದತ್ತಿ, ಬಾಗಲಕೋಟೆ, ಹೊಳೆ ನರಸೀಪುರ, ಕೂಡಲ ಸಂಗಮದಲ್ಲಿ 3 ಸೆಂಟಿ ಮೀಟರ್, ಕೊಪ್ಪಳ, ಕಳಸ, ಚಿಕ್ಕಮಗಳೂರುಗಳಲ್ಲಿ ತಲಾ 2 ಸೆಂಟಿ ಮೀಟರ್, ಕುಮ್ಟಾ, ಇಳಕಲ್, ಬ್ಯಾಡಗಿ, ಬೆಂಗಳೂರು, ರಾಮನಗರ, ಚೆನ್ನರಾಯಪಟ್ಟಣ, ತಿರಮಕೂಡಲು ನರಸೀಪುರ, ತಾಳಗುಪ್ಪಗಳಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಆಗಿದೆ.
ಸೋಮವಾರ ಬೆಳಗ್ಗೆ ವರೆಗಿನ ಮುನ್ಸೂಚನೆಯಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡುಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಸಂಭವ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಏನೂ ಕಂಡುಬರುವುದಿಲ್ಲ.