ಇಂಟರ್ನೆಟ್ನಿಂದ ಮುದ್ರಣ ಮಾಧ್ಯಮಕ್ಕೆ ಧಕ್ಕೆ ಇಲ್ಲ - ತಜ್ಞರ ಅಭಿಮತ
ಬೆಂಗಳೂರು : ಮುದ್ರಣ ಮಾಧ್ಯಮಕ್ಕೆ ಬೇರೆ ಮಾಧ್ಯಮಗಳಿಂದ ಬೆದರಿಕೆ ಇದೆಯೇ? ಈ ಪ್ರಶ್ನೆ ಇವತ್ತು ಹುಟ್ಟಿಕೊಂಡಿರುವುದಲ್ಲ. ಟಿವಿ, ರೇಡಿಯೋನಂಥ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರವೇಶಿಸಿದಾಗಲೇ ಪತ್ರಿಕೋದ್ಯಮಿಗಳು ಕಂಪಿಸಿದ್ದರು. ಈಗ ಆ ಗುಂಪಿಗೆ ಇಂಟರ್ನೆಟ್ ಸೇರಿಕೊಂಡಿದೆ.
ಇಂಟರ್ನೆಟ್ ಮತ್ತು ಮುದ್ರಣ ಮಾಧ್ಯಮಗಳು ಮುಂದಿನ ದಿನಗಳಲ್ಲಿ ಪರಸ್ಪರ ಸ್ಪರ್ಧಿಗಳಾಗಲಿವೆಯೇ, ಅದರಲ್ಲೂ ಜಾಹೀರಾತಿಗೆ ಸಂಬಂಧಿಸಿದಂತೆ ಮುಖಾಮುಖಿ ನಡೆಯಲಿದೆಯೇ ಎಂಬ ಪ್ರಶ್ನೆಗೆ, ಭಾರತೀಯ ವೃತ್ತ ಪತ್ರಿಕೆಗಳ ಸಂಘವು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಹೊಸ ಅರ್ಥ ವ್ಯವಸ್ಥೆಯಲ್ಲಿ ಮುದ್ರಣ ಮಾಧ್ಯಮದ ಶೋಧ ಕುರಿತ ವಿಚಾರ ಸಂಕಿರಣದಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಬೆದರಿಕೆ ಇಲ್ಲ : ಇವತ್ತು ಕೇವಲ 1.5 ಮಿಲಿಯನ್ ಇರುವ ಇಂಟರ್ನೆಟ್ ಬಳಕೆದಾರರು ಮುಂದಿನ 5 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಲಿದ್ದಾರೆ ಎಂಬ ಅಂಶದ ಹಿನ್ನಲೆಯಲ್ಲಿ ವೃತ್ತಪತ್ರಿಕೆಗಳು ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎಂದು ಅಂತಾರಾಷ್ಟ್ರೀಯ ವೃತ್ತಪತ್ರಿಕೆಗಳ ಅಧ್ಯಕ್ಷ ರೋಜರ್ ಪಾರ್ಕಿನ್ಸನ್ ಅಭಿಪ್ರಾಯಪಟ್ಟಿದ್ದಾರೆ. ಕೆಲವು ಪತ್ರಿಕೆಗಳು ತಮ್ಮದೇ ವೆಬ್ಸೈಟ್ ಆರಂಭಿಸುವ ಮೂಲಕ ಪರ್ಯಾಯವನ್ನೂ ಕಂಡುಕೊಳ್ಳುತ್ತಿವೆ ಎಂದರು.
ನೆಟ್ ಇರುವುದು ಇ-ಮೇಲ್ ಮತ್ತು ಇ-ಕಾಮರ್ಸ್ಗೆ ವಿನಾ ಓದುವುದಕ್ಕಲ್ಲ. ಸುದ್ದಿಗಾಗಿ ಮುದ್ರಣ ಮಾಧ್ಯಮ ಅನಿವಾರ್ಯ. ಇಂಥ ಎಲ್ಲ ಕಾರಣಗಳನ್ನು ಸಮರ್ಥವಾಗಿ ಬಳಸಿಕೊಂಡು ಪತ್ರಿಕೆಗಳು ಸ್ಪರ್ಧೆ ಎದುರಿಸಬೇಕೆಂದು ನಯ್ ದುನಿಯಾ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಅಭೈ ಚಾಜ್ಲಾನಿ ಹೇಳಿದ್ದಾರೆ.
ನೆಟ್ ಮುದ್ರಣ ಮಾಧ್ಯಮಕ್ಕೆ ಸ್ಪರ್ಧಿಯಾಗುವುದಿಲ್ಲ ಬದಲಾಗಿ ಪೂರಕವಾಗಿ ಬೆಳೆಯುವ ಸಾಧ್ಯತೆಯ ಜೊತೆಗೆ ಹೊಸ ದಾರಿಗಳ ಶೋಧಕ್ಕೂ ಕಾರಣವಾಗಬಹುದು ಎಂದವರು ಹಿಂದೂಸ್ಥಾನ್ ಟೈಮ್ಸ್ನ ಉಪಾಧ್ಯಕ್ಷ ಶೋಭನಾ ಭಾಟಿಯಾ.
ಏಷ್ಯನ್ ಏಜ್ನ ಸಂಪಾದಕ ಎಂ. ಜೆ. ಅಕ್ಬರ್ ಪ್ರಕಾರ, ಯಾವುದೇ ಹೊಸ ಮಾಧ್ಯಮ ಇನ್ನೂಂದು ಮಾಧ್ಯಮವನ್ನು ನುಂಗಿ ಬೆಳೆಯುತ್ತದೆ ಎಂದು ಕೆಲವರಲ್ಲಿರುವ ಸ್ಥಾಪಿತ ಅಭಿಪ್ರಾಯ ತಪ್ಪು. ಸ್ಪರ್ಧೆ ಎದುರಾದಾಗ ಪರ್ಯಾಯವನ್ನು ಕಂಡುಕೊಳ್ಳುತ್ತವೆ. ನೆಟ್ ಕೇವಲ ಇನ್ನೊಂದು ಮಾಧ್ಯಮ ಇದರಿಂದ ಯಾವುದೇ ಬೆದರಿಕೆ ಇಲ್ಲ ಎನ್ನುತ್ತಾರೆ.
ಪದಾಧಿಕಾರಿಗಳು : ಹಿಂದೂ ಸಮಾಚಾರ್ ಗುಂಪಿನ ವಿಜಯ್ ಕುಮಾರ್ ಚೋಪ್ರಾ ಭಾರತೀಯ ವೃತ್ತಪತ್ರಿಕೆಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಸಂಘದ 61ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಯ್ಕೆ ನಡೆಯಿತು. ಈ ಮುಂಚೆ ಎಬಿಪಿ ಲಿಮಿಟೆಡ್ನ ಶೋಭಾ ಸುಬ್ರಮಣ್ಯನ್ ಅಧ್ಯಕ್ಷರಾಗಿದ್ದರು. ಸಾಕಲ್ನ ಪ್ರತಾಪ್ ಜಿ. ಪವಾರ್, ನಯ್ ದುನಿಯಾದ ಅಭೈ ಚಾಜ್ಲಾನಿ ಉಪಾಧ್ಯಕ್ಷರಾಗಿದ್ದು , ಡೈಲಿ ತೆಗ್ನ ವಿಶ್ವಬಂಧುಗುಪ್ತ ಗೌರವ ಕೋಶಾಧ್ಯಕ್ಷರಾಗಿದ್ದಾರೆ.