ಮತ್ತೆ ಚುರುಕಾದ ಮಳೆರಾಯ
ಬೆಂಗಳೂರು : ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ಕಳೆದೆರಡು ದಿನದಿಂದ ವಿಶ್ರಾಂತಿ ಪಡೆದಿದ್ದ ವರುಣದೇವ ಮತ್ತೆ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖನಾಗಿದ್ದಾನೆ. ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನ ಕೆಲವೆಡೆಗಳಲ್ಲೂ ಮಳೆಯಾಗಿದೆ.
ಮಂಡ್ಯದಲ್ಲಿ ಅತಿ ಹೆಚ್ಚು ಎಂದರೆ 8 ಸೆಂಟಿ ಮೀಟರ್ ಮಳೆ ಬಿದ್ದಿದೆ. ಕೊಳ್ಳೇಗಾಲ, ಕೆ.ಆರ್. ಸಾಗರ, ಸಕಲೇಶಪುರಗಳಲ್ಲಿ 7 ಸೆಂಟಿ ಮೀಟರ್ ಮಳೆ ಬಿದ್ದಿದೆ. ಆನಂದಾಪುರದಲ್ಲಿ 6, ಬಂಡೀಪುರ, ಚಾಮರಾಜನಗರ, ಹೆಗ್ಗಡದೇವನಕೋಟೆಯಲ್ಲಿ ತಲಾ 5, ಶ್ರವಣಬೆಳಗೊಳ, ವೀರಾಜಪೇಟೆ, ಪಾಂಡವಪುರಗಳಲ್ಲಿ ತಲಾ 4, ಹಳಿಯಾಳ, ಬೇಲೂರು, ಹಳ್ಳಿ ಮೈಸೂರು, ಬಸರಾಳು, ಅಮ್ಟೆಗಳಲ್ಲಿ ತಲಾ 3 ಸೆಂಟಿ ಮೀಟರ್ ಮಳೆ ಆಗಿದ್ದರೆ, ಮಾಗಡಿ, ಅರಸಾಳು, ಹೊಳೆ ನರಸೀಪುರಗಳಲ್ಲಿ 2 ಸೆಂಟಿ ಮೀಟರ್ ಮಳೆ ಆಗಿದೆ. ಅಣ್ಣಿಗೇರಿ, ಚನ್ನಪಟ್ಟಣ, ನಾಪೋಕ್ಲು, ಮೈಸೂರಿನಲ್ಲಿ 1 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಶನಿವಾರ ಬೆಳಗ್ಗೆಯವರೆಗಿನ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಂಭವ ಇದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲೂ ಮಳೆ ನಿರೀಕ್ಷಿತ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮುಖ್ಯವಾಗಿ ಮೋಡ ಕವಿದ ವಾತಾವರಣ ಇದ್ದು ಒಂದೆರಡು ಬಾರಿ ಮಳೆ ಬೀಳುವ ಸಂಭವ ಇದೆ. ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ಒಣಹವೆ ಇತ್ತು. ಮಧ್ಯಾಹ್ನ ಸ್ವಲ್ಪ ಕಾಲ ಜೋರು ಮಳೆಯೇ ಸುರಿಯಿತು.