ಬುದ್ಧನ ವಿಪಸ್ಯನತಂತ್ರಕ್ಕೆ ಎಲ್ಲಿಲ್ಲದ ಬೇಡಿಕೆ
ಸ್ಯಾನ್ ಫ್ರಾನ್ಸಿಸ್ಕೋ : ಗೌತಮ ಬುದ್ಧ ಬೋಧಿಸಿದ ಮನದಲ್ಲೇ ಚಿಂತಿಸುವ ವಿಪಸ್ಯನ ತಂತ್ರ ಆತನ ಅನುಯಾಯಿಗಳಿಗಷ್ಟೇ ಸೀಮಿತವಾಗಿಲ್ಲ. ಬಹುತೇಕರ ಪಾಲಿಗೆ ಅದು ತಾವು ಕುಡಿಯುವ ಟೀಯಷ್ಟೇ ಅನಿವಾರ್ಯ ಆಗತೊಡಗಿದೆ.
10 ದಿನಗಳ ಕಾಲ ನಡೆಯುವ ವಿಪಸ್ಯನ ತಂತ್ರದ ತರಬೇ ತಿಗೆ ನೂಕುನುಗ್ಗಲು .ಈ ಹತ್ತು ದಿನಗಳ ಕಾಲ ಬರೆಯುವಂತಿಲ್ಲ, ಓದುವಂತಿಲ್ಲ, ಧೂಮಪಾನ, ಮಧ್ಯಪಾನ ನಿಷಿದ್ಧ, ಸಿನಿಮಾ , ಸಂಗೀತ ಯಾವುದೂ ಇಲ್ಲ. ಕೇವಲ ಧ್ಯಾನ, ಧ್ಯಾನ. ತರಬೇತಿ ಕಾಲದಲ್ಲಿ ಬರಿ ಶಾಖಾಹಾರ ಊಟ ಸಿಗುತ್ತದೆ. ದಿನಕ್ಕೆ ಕನಿಷ್ಠ 10 ಗಂಟೆಗಳ ಕಾಲ ಧ್ಯಾನ ಮಾಡಬೇಕು. ಈ ತಂತ್ರ ಪ್ರೀತಿ ಮತ್ತು ಕರುಣೆಯನ್ನು ಹುಟ್ಟುಹಾಕುತ್ತದೆ ಎಂಬುದು ವಿಶ್ವವಿಖ್ಯಾತ ಭಾರತೀಯ ವಿಪಸ್ಯನ ಶಿಕ್ಷಕ ಎಸ್. ಎನ್. ಗೋಯೆಂಕಾ ಅವರ ಅಭಿಪ್ರಾಯ. ಬುದ್ಧನ ಉಪದೇಶಗಳಲ್ಲೇ ಪ್ರಬಲ ತತ್ವವಾದ ವಿಪಸ್ಯನ ತಂತ್ರ ಮಾನಸಿಕ ಆರೋಗ್ಯ ಕೊಡುವುದಲ್ಲದೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸಿಟ್ಟು ಮಾಯ : ವಸ್ತುಗಳನ್ನು ನೋಡುವುದು ಮತ್ತು ಅನುಭವಿಸುವುದರ ಕುರಿತು ವಿಶಿಷ್ಠ ನೋಟ ನೀಡುವುದೇ ವಿಪಸ್ಯನ ತಂತ್ರ. ಇದರಿಂಬ ಪ್ರತಿಯಾಬ್ಬರ ಚಿಂತನಾಲಹರಿ ಬದಲಾಗುತ್ತಾ ಹೋಗುತ್ತದೆ ಎಂದು ಗೋಯೆಂಕಾ ಹೇಳುತ್ತಾರೆ. ತುಂಬಾ ವೇಳೆ ಸಿಟ್ಟಿನಿಂದ ಇರುವವರಿಗೆ ವಿಪಸ್ಯನ ತಂತ್ರದಿಂದ ಸಿಟ್ಟಿನ ಆರ್ದ್ರತೆ ಕಡಿಮೆಯಾಗುತ್ತಾ ಹೋಗುತ್ತದೆ, ನಂತರ ಮಾಯವಾಗುತ್ತದೆ. ಈ ತಂತ್ರದಿಂದ ತಮ್ಮ ಮನಸ್ಸಿನಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅನೇಕ ಕಟ್ಟಾ ಕ್ರಿಮಿನಲ್ಗಳೂ ತಮ್ಮ ಚಿಂತನಾ ವಿಧಾನವನ್ನು ಬದಲಿಸಿಕೊಳ್ಳುತ್ತಾರೆ. ಅವರು ಶಾಂತಿಯನ್ನು ಅನುಭವಿಸತೊಡಗುತ್ತಾರೆ.
ಕಳೆದ ತಿಂಗಳು ವಿಶ್ವಸಂಸ್ಥೆಯಲ್ಲಿ ನಡೆದ ವಿಶ್ವ ಧಾರ್ಮಿಕ ನಾಯಕರ ಶಾಂತಿ ಸಮಾವೇಶದಲ್ಲಿ ಸನ್ಮಾನಿತರಾದ 76ರ ಹರೆಯದ ಗೋಯಂಕಾ, ವಿಪಸ್ಯನ ತಂತ್ರ ಮನುಷ್ಯನ ಯೋಚನಾಲಹರಿಯನ್ನು ಸಂಪೂರ್ಣವಾಗಿ ಬದಲಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಿದಿನ ಇದನ್ನು ಮುಂದುವರಿಸಿದರೆ ಸಿಟ್ಟು ಮತ್ತು ದ್ವೇಷಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಹಾಗೆಯೇ ಅವುಗಳನ್ನು ಬುದ್ಧನಂತೆ ಗೆಲ್ಲಬಹುದು. ಇದೇ ಬುದ್ಧ ಕಂಡುಕೊಂಡ ಮೋಕ್ಷ ಎನ್ನುತ್ತಾರೆ ಗೋಯಂಕಾ.
ಗೋಯಂಕಾ ಅವರು 1955ರಲ್ಲಿ ತಮ್ಮ 31ನೇ ವಯಸ್ಸಿನಲ್ಲಿ ವಿಪಸ್ಯನ ತಂತ್ರದೆಡೆಗೆ ಹೊರಳಿದಾಗ ಬರ್ಮಾದ ಹೆಸರಾಂತ ಉದ್ಯಮಿಯಾಗಿದ್ದರು. ಬರ್ಮಾದ ಗಿನ ಹೆಸರಾಂತ ವಿಪಸ್ಯನ ಶಿಕ್ಷಕರಾಗಿದ್ದ ಸಯೋಗ್ಯಿ ಉಬಾಕಿನ್ ಅವರ ಹತ್ತಿರ ಶಿಶ್ಯರಾಗಿ 14 ವರ್ಷ ತರಭೇತಿ ಪಡೆದಿದ್ದಾರೆ. ಸಯೋಗ್ಯಿ ಉಬಾಕಿನ್ ಅವರ ಪರಿಚಯವಾದ ಕೇವಲ ಒಂದು ವಾರದೊಳಗೆ ತಮ್ಮ ತಲೆನೋವು ವಾಸಿಯಾಯಿತು ಎನ್ನುವ ಗೋಯಂಕಾ , ವಿಪಸ್ಯನ ಒಂದು ಅಪ್ಪಟ ವೈಜ್ಞಾನಿಕ ವಿಧಾನ, ಎಲ್ಲಕ್ಕಿಂತ ಜೀವನ ಕಲೆ ಎನ್ನುತ್ತಾರೆ.
ಜೈಲಿನಲ್ಲಿ ಶಿಬಿರ : 1969ರಲ್ಲಿ ತಮ್ಮ ಮಕ್ಕಳಿಗೆ ವ್ಯವಹಾರ ಒಪ್ಪಿಸಿ ಭಾರತದೆಡೆಗೆ ಬಂದ ಗೋಯಂಕಾ, ವಿಪಸ್ಯನ ತಂತ್ರವನ್ನು ಪ್ರಚಾರ ಮಾಡುತ್ತಾ, ಶಿಬಿರಗಳನ್ನು ನಡೆಸುತ್ತಾ ವಿಶ್ವ ಸಂಚಾರ ಮಾಡುತ್ತಿದ್ದಾರೆ. ಅಂದಹಾಗೆ ತರಬೇತಿ ಉಚಿತ. ಕೊನೆಯಲ್ಲಿ ಸ್ವ-ಇಚ್ಚೆಯಿಂದ ಏನನ್ನಾದರೂ ಕೊಡಬಹುದು.
ಇದುವರೆಗೆ ಸುಮಾರು 600 ಜನರಿಗೆ ತರಬೇತಿ ನೀಡಿರುವ ಗೋಯಂಕಾ, 1995ರಲ್ಲಿ ತಿಹಾರ್ ಜೈಲಿನಲ್ಲೂ 10 ದಿನಗಳ ಶಿಬಿರ ನಡೆಸಿಕೊಟ್ಟಿದ್ದಾರೆ. ಈಗ ಜೈಲಿನಲ್ಲಿ ಒಂದು ಧ್ಯಾನ ಕೇಂದ್ರವನ್ನೇ ಸ್ಥಾಪಿಸಲಾಗಿದೆ. ಈಗ ಧರ್ಮದ ಬೇಧವಿಲ್ಲದೆ ವಿಪಸ್ಯನ ತಂತ್ರದ ಕಡೆಗೆ ಜನ ಹೊರಳುತ್ತಿದ್ದಾರೆ ಎನ್ನುತ್ತಾರೆ ಗೋಯಂಕಾ.