ಕೇಂದ್ರದ ಕೃಷಿ ನೀತಿಗೆ ರಾಜ್ಯದ ವಿರೋಧ ಸಂಭವ
ಬೆಂಗಳೂರು: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವ ವಾಣಿಜ್ಯ ಸಂಘಟನೆ ಜೊತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಕರ್ನಾಟಕ ತನ್ನ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.
ಒಪ್ಪಂದದಿಂದ ಭಾರತದ ಕೃಷಿ ಕ್ಷೇತ್ರಕ್ಕೆ ತೀವ್ರ ತೊಂದರೆಯುಂಟಾಗಲಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದ್ದು, ರಾಜ್ಯದ ಕೃಷಿ ಸಚಿವ ಟಿ. ಬಿ. ಜಯಚಂದ್ರ ಅವರು ಈ ಸಂಬಂಧ ಚರ್ಚಿಸಲು ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳ ಕೃಷಿ ಸಚಿವರ ಸಭೆ ಕರೆದಿದ್ದಾರೆ.
ಬುಧವಾರ ದೆಹಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ರಾಜ್ಯಗಳಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಕುರಿತು ಚರ್ಚೆ ನಡೆಸಲಾಗುವುದು. ವಿಶ್ವ ವಾಣಿಜ್ಯ ಸಂಘಟನೆಯ ಜೊತೆಗಿನ ಒಪ್ಪಂದದ ಹಿನ್ನಲೆಯಲ್ಲಿ ಹೊಸ ರಾಷ್ಟ್ರೀಯ ಕೃಷಿ ನೀತಿ ಸಂಬಂಧ ಕೇಂದ್ರ ಕೃಷಿ ಸಚಿವ ನಿತೀಶ್ಕುಮಾರ್ ಅವರು ಕರೆದಿರುವ ಸಭೆಗೆ ಒಂದು ದಿನ ಈ ಮುಂಚೆ ಸಭೆ ನಡೆಯುತ್ತಿದೆ.
ಸಭೆಗೆ ಗೋವಾ ಮತ್ತು ಮಹಾರಾಷ್ಟ್ರಗಳ ಕೃಷಿ ಮಂತ್ರಿಗಳನ್ನು ಆಹ್ವಾನಿಸಲಾಗಿದ್ದು, ಕುಸಿಯುತ್ತಿರುವ ಕೃಷಿ ಉತ್ಪನ್ನಗಳ ಬೆಲೆಯನ್ನು ತಡೆಯುವ ಕುರಿತು ಚರ್ಚಿಸಲಾಗುವುದು. ಒಪ್ಪಂದದ ಕುರಿತು ರಾಜ್ಯಗಳ ನಿಲುವು ವಿವರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುವುದುದೆಂದು ಸಚಿವ ಜಯಚಂದ್ರ ತಿಳಿಸಿದ್ದಾರೆ.
ಒಡಂಬಡಿಕೆಯಿಂದ ಹಿಂದೆ ಸರಿಯಲು ಒತ್ತಾಯ : ರಾಷ್ಟ್ರದ ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ ಒಡಂಬಡಿಕೆಯಿಂದ ಹಿಂದೆ ಸರಿಯಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಆಹಾರ ಮತ್ತು ಕೃಷಿ ಸಂಘಟನೆಯ ಮಾಜಿ ಅಧಿಕಾರಿ ಪ್ರೇಮನಾಥ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರ ಈಗಾಗಲೇ ಸಮಿತಿಯನ್ನು ನೇಮಿಸಲಾಗಿದ್ದು, ಸಮಿತಿಯು ವಿಶ್ವ ವಾಣಿಜ್ಯ ಸಂಘಟನೆಯ ಜೊತೆಗಿನ ಒಡಂಬಡಿಕೆ ಮತ್ತು ಹೊಸ ಕೃಷಿ ನೀತಿಗಳ ಬಗ್ಗೆ ಅಧ್ಯಯನ ನಡೆಸಲಿದೆ. ನಂತರ ರಾಜ್ಯ ತನ್ನ ಅಭಿಪ್ರಾಯ ಮಂಡಿಸಲಿದೆ ಎಂದು ಹೇಳಿದ್ದಾರೆ.
ಎಲ್ಲ ರಾಜ್ಯಗಳಿಗೆ ಸಂಬಂಧಿಸಿದಂತೆ ಸಮಾನ ಅಭಿಪ್ರಾಯ ರೂಪಿಸುವುದು ಈ ಸಭೆಯ ಉದ್ದೇಶ. ಇದಕ್ಕಾಗಿ ಒಂದೇ ವೇದಿಕೆಯಡಿ ಸೇರುತ್ತಿದ್ದೇವೆ ಎಂದು ಹೇಳಿರುವ ಸಚಿವರು ರಾಜ್ಯದಲ್ಲಿ ಜೋಳದ ಬೆಲೆ ಕುಸಿತಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕೃಷಿ ಮೇಲೆ ಸಂಪೂರ್ಣ ಅವಲಂಭಿತವಾಗಿರುವ ರೈತರು ಕೃಷಿಗಾಗಿ ಹಾಕಿರುವ ಖರ್ಚು ಸಿಗದೆ ಒದ್ದಾಡುತ್ತಿದ್ದಾರೆ ಆದ್ದರಿಂದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಹೇಳಿದ್ದಾರೆ.