ಶ್ರಮಿಕ ವರ್ಗಕ್ಕೆ ವಿರಾಮ ಬೇಕಾ ?
ಬೆಂಗಳೂರು : ಅವಿರತವಾಗಿ ದುಡಿದ ಎಲ್ಲರಿಗೂ ಸಂಪೂರ್ಣ ವಿಶ್ರಾಂತಿ ಬೇಕೇ ಬೇಕು. ಸಂಪೂರ್ಣ ವಿಶ್ರಾಂತಿ ಸಿಗದಿದ್ದರೆ ಬೇಡ, ಅಟ್ಲೀಸ್ಟ್ ಅರೆ ವಿಶ್ರಾಂತಿಯಾದರೂ ಬೇಡವೆ. ಈಗ ವರುಣ ಕೂಡ ತನ್ನ 24 ಗಂಟೆಗಳ ನಿರಂತರ ಕಾಯಕದಿಂದ ಕೊಂಚ ಬಿಡುವು ಪಡೆಯುತ್ತಿದ್ದಾನೆ. ಅಂತೆಯೇ, ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲ. ಮುಂಗಾರು ದುರ್ಬಲವಾಯಿತೆಂದು ವರುಣನ ಹಳಿಯುವ ಅಗತ್ಯವೇನಿಲ್ಲ. ಜಲಾಶಯಗಳು ನೀರನ್ನು ಹಿಡಿದಿಡುವ ಸಾಮರ್ಥ್ಯ ಇರುವಷ್ಟು ಮಳೆ ಸುರಿದಿದೆ. ಇನ್ನು ಹೆಚ್ಚು ಸುರಿದರೆ ಅಪಾಯವಾದೀತೆಂಬ ಎಚ್ಚರವಿರಬಹುದು !
ಆದಾಗ್ಯೂ ತಿಂಗಳಿಂದ ಜೋರು ಮಾಡಿದ ವರುಣ ಹಠಾತ್ ನಿಂತರೆ ಜನ ಬೇಜಾರಾದಾರೆಂಬ ಕಾರಣಕ್ಕಾಗಿ ಅಲ್ಲಲ್ಲಿ ತನ್ನ ದರ್ಶನ ಕೊಟ್ಟಿದ್ದಾನೆ. ಒಳನಾಡಿನ ಹಾಗೂ ಕರಾವಳಿಯ ಅಲ್ಲಲ್ಲಿ ಮಳೆ ಸುರಿಸಿದ್ದಾನೆ. ಲಕ್ಷ್ಮೇಶ್ವರದಲ್ಲಿ 3, ಸುಬ್ರಹ್ಮಣ್ಯ, ಮೂಡಿಗೆರೆಯಲ್ಲಿ 2 ಸೆಂಟಿ ಮೀಟರ್ ಮಳೆ ಸುರಿಸಿದ್ದಾನೆ. ಮಾಣಿಗೆ ಒಂದು ಸೆಂಟಿ ಮೀಟರ್ ಮಳೆ ಸಾಕೆಂದು ನಿರ್ಧರಿಸಿದ್ದಾನೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ಒಳನಾಡಿನ ಅಲ್ಲಲ್ಲಿ ಹಾಗೂ ಕರಾವಳಿಯಲ್ಲಿ ಮತ್ತೆ ತಾನು ಕಾಣಿಸಿಕೊಳ್ಳುವ ಸೂಚನೆಯನ್ನು ಹವಾಮಾನ ಇಲಾಖೆಯವರಿಗೆ ವರುಣ ನೀಡಿದ್ದಾನಂತೆ. ಇಲ್ಲೆಲ್ಲಾ ಗುಡುಗಿನ ನೆರವಿನೊಂದಿಗೆ ತನ್ನ ಅಸ್ತಿತ್ವದ ಪರಿಚಯ ಮಾಡಿಸುವ ಸಾಧ್ಯತೆ ಇದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾಗಶಃ ಮೋಡ ಕವಿದಿರುವಂತೆ ಆದೇಶಿಸಿರುವ ಮಳೆರಾಯ ಸಂಜೆ ಅಥವಾ ರಾತ್ರಿ ಇಲ್ಲಿಗೆ ಭೇಟಿ ನೀಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾನಂತೆ. ಇಲ್ಲಿಗೆ ವರುಣ ಪುರಾಣದ ಮಂಗಳವಾರದ ಅಧ್ಯಾಯ ಮುಕ್ತಾಯ.