ಬಿಡುವು ಪಡೆದ ವರುಣದೇವ
ಬೆಂಗಳೂರು : ಆಲಮಟ್ಟಿ ಜಲಾಶಯದಲ್ಲಿ ದಾಖಲೆಯ 515 ಮೀಟರ್ ನೀರು ಸಂಗ್ರಹವಾಗಿದೆ. ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ತುಂಬಿ ಹೋಗಿದೆ. ಉಳಿದ ಜಲಾಶಯಗಳೂ ಕಂಠಭರ್ತಿ ತುಂಬಿವೆ. ಸತತವಾಗಿ ಸುರಿಯುತ್ತಿದ್ದ ಮಳೆರಾಯ ಈಗ ಕೊಂಚ ಬಿಡುವು ಪಡೆದಿದ್ದಾನೆ.
ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯ ಅಲ್ಲಲ್ಲಿ ಚದುರಿದಂತೆ ಮಳೆ ಆಗಿದೆ. ಕೆಲವೆಡೆ ಒಣ ಹವೆ ಮುಂದುವರಿದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮೂಲ್ಕಿ ಹಾಗೂ ಪಣಂಬೂರಿನಲ್ಲಿ 2 ಸೆಂಟಿ ಮೀಟರ್ ಮಳೆ ಆಗಿದ್ದರೆ, ಧರ್ಮಸ್ಥಳ, ಬೆಳ್ತಂಗಡಿ, ಮಂಗಳೂರು ವಿಮಾನ ನಿಲ್ದಾಣ, ಬಿಜಾಪುರಗಳಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಆಗಿದೆ.
ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಏನೂ ಕಂಡು ಬಂದಿಲ್ಲ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮೋಡ ಮುಸುಕಿದ ವಾತಾವರಣ ಇದ್ದು, ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಆಗುವ ನಿರೀಕ್ಷೆ ಇದೆ. ಕರಾವಳಿಯ ಅಲ್ಲಲ್ಲೂ ಮಳೆ ನಿರೀಕ್ಷಿತ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಂಭವ ಇದೆ.