ರಾಜ್ಯದ ಎಲ್ಲಾ ವಿದ್ಯುತ್ ಸಂಪರ್ಕಗಳಿಗೂ ಮೀಟರ್ : ಕೆಪಿಟಿಸಿಎಲ್
ಬೆಂಗಳೂರು :ವಿದ್ಯುತ್ ಸೋರುವಿಕೆ ತಡೆಗಟ್ಟುವ ಮತ್ತು ನಿಗಮದ ಆದಾಯ ಹೆಚ್ಚಿಸುವ ದೃಷ್ಟಿಯಿಂದ ರಾಜ್ಯದ ಎಲ್ಲ ವಿದ್ಯುತ್ ಸಂಪರ್ಕಗಳಿಗೆ ಮೀಟರ್ ಅಳವಡಿಸಲಾಗುವುದು ಎಂದು ಕೆಪಿಟಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ ಶನಿವಾರ ಹೇಳಿದ್ದಾರೆ.
ಸರ್ ಎಂ.ವಿ. ಸಭಾಂಗಣದಲ್ಲಿ ನಡೆದ ಕೆಇಬಿ ಇಂಜಿಯರ್ಗಳ ಸಂಘದ ಸರ್ವ ಸದಸ್ಯರ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಬೆಂಗಳೂರು ನಗರದಲ್ಲಿ ಶೇ 90 ರಷ್ಟು ಸಂಪರ್ಕಗಳಿಗೆ ಮಾತ್ರ ವಿದ್ಯುತ್ ಮೀಟರ್ಗಳಿವೆ. ಮುಂದಿನ ದಿನಗಳಲ್ಲಿ ಎಲ್ಲ ಸಂಪರ್ಕಗಳಿಗೂ ವಿದ್ಯುತ್ ಮೀಟರ್ಗಳನ್ನು ಅಳವಡಿಸಲಾಗುವುದು ಎಂದ ಅವರು ನಿಗಮದಲ್ಲಿ ಸಮಗ್ರ ಬದಲಾವಣೆ ಆಗಬೇಕಾಗಿದೆ. ನಿಗಮದ ನೌಕರರು ಗ್ರಾಹಕರನ್ನು ಸೌಜನ್ಯದಿಂದ ನೋಡುವಂತೆ ಮತ್ತು ಆರ್ಥಿಕ ಮುಗ್ಗಟ್ಟಿನಲ್ಲಿರುವ ನಿಗಮದ ಚೇತರಿಕೆಯಾಗಬೇಕಿದ್ದಲ್ಲಿ ಇಂಜಿನಿಯರ್ಗಳ ಪಾತ್ರ ಮಹತ್ವದ್ದು ಎಂದರು.
ಪ್ರತಿ ವರ್ಷ 2 ಕೋಟಿ ನಷ್ಟ : ಪ್ರತಿ ವರ್ಷವೂ 2 ಕೋಟಿ ರೂಪಾಯಿ ನಷ್ಟ ಎದುರಿಸುತ್ತಿರುವ ನಿಗಮದ ಆದಾಯ ಹೆಚ್ಚಿಸಲು, ನಗರ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಶೀಘ್ರ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸುವುದು, ಶುಲ್ಕ ವಸೂಲಿ ಮತ್ತು ಖಾಸಗಿ ಕಂಪೆನಿಗಳ 500 ಕೋಟಿ ರೂಪಾಯಿ ಬಾಕಿಯೂ ಸೇರಿದಂತೆ ನಿಗಮಕ್ಕೆ ಬರಬೇಕಾಗಿರುವ ಎಲ್ಲ ಬಾಕಿ ವಸೂಲಿಯ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಾಳಿಗಾರ್ ಹೇಳಿದರು.
(ಇನ್ಫೋ ವಾರ್ತೆ)