ನಗರದಲ್ಲಿ ಚೌತಿಗೆ ಅಡ್ಡಿ ಬರಲಿಲ್ಲ ಮಳೆರಾಯ
ಬೆಂಗಳೂರು : ಬೆಂಗಳೂರಿಗರು ಮಳೆಯ ಕಾಟವಿಲ್ಲದೆ ಶುಕ್ರವಾರ ಭಕ್ತಿ ಭಾವಗಳಿಂದ ಗಣೇಶ ಚತುರ್ಥಿಯನ್ನು ಆಚರಿಸಿದರು. ಗಣೇಶನ ಹಬ್ಬಕ್ಕೆ ಅಡ್ಡಿಯಾಗಬಾರದೆಂದೋ ಏನೋ ಮಳೆರಾಯ ಬೆಂಗಳೂರೂ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ದುರ್ಬಲನಾಗಿದ್ದ. ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಾತ್ರ ಶುಕ್ರವಾರ ಮಳೆಯಾಗಿದೆ.
ಖಾನಾಪುರದಲ್ಲಿ 3, ಧರ್ಮಸ್ಥಳ, ಬೆಳಗಾವಿ ವಿಮಾನ ನಿಲ್ದಾಣ, ಬೆಳಗಾವಿ, ಜೋಯಿಡಾ, ಕಾರವಾರದಲ್ಲಿ 2 ಸೆಂಟಿ ಮೀಟರ್ ಮಳೆ ಬಿದ್ದಿದೆ. ಸವಣೂರು, ಮಂಕಿ, ಕಮ್ಮರಡಿ, ರಾಯಚೂರು, ಕೆ.ಜಿ.ಎಫ್ಗಳಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಅವಧಿಗೆ ನೀಡಿರುವ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಕೆಲವೆಡೆ, ಉತ್ತರ ಒಳನಾಡು ಹಾಗೂ ಕರಾವಳಿಯ ನಾನಾ ಕಡೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಾಧ್ಯತೆ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಹಗುರದಿಂದ ಮಳೆ ಬೀಳುವ ನಿರೀಕ್ಷೆ ಇದೆ.