‘ವೀರಪ್ಪನ್ ವಿಷಯದಲ್ಲಿ ಸೋತಿರುವ ಕೃಷ್ಣ ರಾಜೀನಾಮೆ ಕೊಡಲಿ’
ಗುಲ್ಬರ್ಗಾ : ಸರ್ಕಾರದ ವೈಫಲ್ಯವನ್ನು ಸುಪ್ರೀಂಕೋರ್ಟ್ ಖಂಡಿಸಿರುವ ಹಿನ್ನೆಲೆಯಲ್ಲಿ , ನೈತಿಕ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಕೃಷ್ಣ ರಾಜೀನಾಮೆ ನೀಡಬೇಕೆಂದು ಕರ್ನಾಟಕ ಸಂಯುಕ್ತ ಜನತಾದಳದ ಸಂಸದೀಯ ಮಂಡಳಿ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಎಸ್.ಕೆ. ಕಾಂತ ಆಗ್ರಹಿಸಿದ್ದಾರೆ.
ಶನಿವಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಅವರು ಸರ್ಕಾರದ ವಿರುದ್ಧದ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಬಗೆಗೆ ಕರ್ನಾಟಕ ಸರ್ಕಾರ ಅನಾಸ್ಥೆ ತಳೆದಿದೆ ಎಂದು ಶುಕ್ರವಾರ ಸುಪ್ರೀಂಕೋರ್ಟ್ ಖಂಡಾತುಂಡಾಗಿ ಹೇಳಿರುವುದು ಸರ್ಕಾರದ ವೈಫಲ್ಯವನ್ನು ಬಿಂಬಿಸುತ್ತದೆ ಎಂದಿದ್ದಾರೆ.
ವೀರಪ್ಪನ್ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಿದ್ದ ಎಸ್ಪಿ ಅರ್ಕೇಶ್, ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ಬೇಸತ್ತ ಅರ್ಕೇಶ್ ವಿಶೇಷ ಕಾರ್ಯ ಪಡೆಯ ಯಾವ ಸಭೆಗೂ ಹಾಜರಾಗಲಿಲ್ಲ. ವೀರಪ್ಪನ್ ಹಿಡಿಯಲು ಸರ್ಕಾರ ಮಾಡಿರುವ ಖರ್ಚಿಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದ್ದರು ಎಂದು ಕಾಂತ ವಿವರಿಸಿದರು.
(ಯುಎನ್ಐ)