ಕಾವೇರಿ ಗಲಭೆ ಸಂತ್ರಸ್ಥರಿಗೆ ಪರಿಹಾರ ನೀಡುವಂತೆ ರಾಜ್ಕುಮಾರ್ ಮನವಿ
ಬೆಂಗಳೂರು : ‘ಕಾವೇರಿ ಗಲಾಟೆಯಲ್ಲಿ ನಷ್ಟಕ್ಕೊಳಗಾದವರಿಗೆ ಧನ ಸಹಾಯ ಮಾಡುವ ಭರವಸೆ ನೀಡಿದ್ದಿರಂತೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆ ಪರಿಹಾರ ನಿಧಿ ಸ್ಥಾಪಿಸಿ, ನಮ್ಮ ಬಿಡುಗಡೆ ಮಾಡಿಸಿ’ ಇದು ರಾಜ್ಕುಮಾರ್ ಅವರು ಮಾಡಿರುವ ಮನವಿ. ಚೆನ್ನೈ ತಲುಪಿರುವ ಕ್ಯಾಸೆಟ್ನಲ್ಲಿ ರುವ ಆ ಮನವಿಯನ್ನು ಖಾಸಗಿ ಟಿವಿ ಚಾನಲ್ ಪ್ರಸಾರ ಮಾಡಿದೆ.
ಕ್ಯಾಸೆಟ್ ನೋಡಿದ ನಂತರ ಕಾನೂನು ಸಚಿವ ಚಂದ್ರೇಗೌಡ ಹಾಗೂ ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊಕದ್ದಮೆಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸರ್ವೋನ್ನತ ನ್ಯಾಯಾಲಯವನ್ನು ಕೋರಲಾಗುವುದು ಎಂದು ತಿಳಿಸಿದರು.
ವೀರಪ್ಪನ್ ಕೇವಲ ಹಳೆ ಬೇಡಿಕೆಗೆ ವಿವರಣೆ ಕೇಳಿದ್ದಾನೆ. ಪೊಂಗಲ್ ಹೊತ್ತಿಗೆ ತಿರುವಳ್ಳವರ್ ಹಾಗೂ ಸರ್ವಜ್ಞ ಮೂರ್ತಿಯ ಪ್ರತಿಮೆಯನ್ನು ಅನಾವರಣ ಮಾಡಲು ಎರಡೂ ಸರಕಾರಗಳು ಒಪ್ಪಿವೆ ಎಂದು ಕೃಷ್ಣ ಹೇಳಿದರು.
ಈ ಮಧ್ಯೆ ರಾಜ್ ಬಿಡುಗಡೆ ಸಂಬಂಧ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ತೃಪ್ತಿ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆ ಶಾಂತಿ, ಸೌಹಾರ್ದ ಕಾಪಾಡಬೇಕೆಂದು ಅವರು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.
ಸರ್ವಪಕ್ಷ ಸಭೆ ಸೋಮವಾರ : ಸರ್ವೋನ್ನತ ನ್ಯಾಯಾಲಯದ ತಡೆಯಾಜ್ಞೆಯ ತೀರ್ಪಿನ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ಸೋಮವಾರ ಬೆಳಗ್ಗೆ 10.30ಕ್ಕೆ ರಾಜ್ಯ ಸಚಿವ ಸಂಪುಟದ ತುರ್ತು ಸಭೆಯನ್ನು ಮುಖ್ಯಮಂತ್ರಿಗಳು ಕರೆದಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಸಹ ಕರೆಯಲಾಗಿದೆ. ಈ ಸಭೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು.