ಹೊಸ ಕ್ಯಾಸೆಟ್ನಲ್ಲಿ ವಿಶೇಷವೇನಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ
ಬೆಂಗಳೂರು : ವೀರಪ್ಪನ್ ಅಡಗುತಾಣದಿಂದ ಬಂದಿರುವ ಹೊಸ ವಿಡೀಯೋ ಕ್ಯಾಸೆಟ್ ಅನ್ನು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ವೀಕ್ಷಿಸಿರುವುದಾಗಿ ಹೇಳಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ , ಆ ಕ್ಯಾಸೆಟ್ನಲ್ಲಿ ವಿಶೇಷವೇನೂ ಇಲ್ಲ ಎಂದಷ್ಟೇ ಹೇಳಿದ್ದಾರೆ.
ಕ್ಯಾಸೆಟ್ನಲ್ಲಿರುವ ಹೊಸ ಅಂಶಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಹಾರಿಕೆಯ ಉತ್ತರ ನೀಡಿರುವುದು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ವೀರಪ್ಪನ್ ಬೇಡಿಕೆಯಂತೆ ಆತನ ಸಹಚರರಾದ 51 ಮಂದಿ ಟಾಡಾ ಬಂದಿತರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಸೋಮವಾರವೇ ಅಂತಿಮ ತೀರ್ಪು ನೀಡುವಂತೆ ಸುರ್ಪ್ರೀಂ ಕೋರ್ಟ್ ಅನ್ನು ಕೋರಲಾಗುವುದು ಎಂದೂ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಉತ್ತಮವಾಗಿದೆ. ಸರ್ವೋನ್ನತ ನ್ಯಾಯಾಲಯ ರಾಜ್ಯ ಸರಕಾರದ ಕ್ಯಾರ್ಯವೈಖರಿಯ ಬಗ್ಗೆ ಆಡಿರುವ ಮಾತುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ಆಗ್ಗಿಂದಾಗ್ಗೆ ನಮ್ಮ ಕಾರ್ಯತಂತ್ರವನ್ನು ಪರಾಮರ್ಶಿಸಿಕೊಳ್ಳುವ ಮೂಲಕ ಉತ್ತಮ ಆಡಳಿತ ನೀಡುವುದಾಗಿ ಅವರು ಹೇಳಿದರು.
ಹೊಸ ಕ್ಯಾಸೆಟ್ನಲ್ಲಿ ವಿಶೇಷ ಏನಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ. ಹಾಗಾದರೆ ಆ ಕ್ಯಾಸೆಟ್ ಬಂದುದಾದರೂ ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕ್ಯಾಸೆಟ್ನಲ್ಲಿ ಇರುವ ಅಂಶಗಳು ಮತ್ತೆ ವದಂತಿಗಳಿಗೆ ಆಹಾರವಾಗುವ ಸಾಧ್ಯತೆಗಳೇ ಹೆಚ್ಚು.