ವೀರಪ್ಪನ್ನಿಂದ 50 ಕೋಟಿ ರು. ಬೇಡಿಕೆ, ಸೆ. 11ರ ಗಡುವು?
ಬೆಂಗಳೂರು : ರಾಜ್ಕುಮಾರ್ ಅವರನ್ನು ಬಂಧಿಸಿ ಎರಡೂ ಸರಕಾರಗಳನ್ನು ಕೈಗೊಂಬೆಯಂತೆ ಆಡಿಸುತ್ತಿರುವ ವೀರಪ್ಪನ್ ಶುಕ್ರವಾರ ರಾತ್ರಿ ಕಳುಹಿಸಿರುವ ಹೊಸ ಕ್ಯಾಸೆಟ್ನಲ್ಲಿ 50 ಕೋಟಿ ರುಪಾಯಿ ಬೇಡಿಕೆ ಇಟ್ಟಿದ್ದಾನೆ, ಬೇಡಿಕೆ ಈಡೇರಿಸಲು ಸೆ.11ರ ಗಡುವನ್ನು ಹಾಕಿದ್ದಾನೆ.
ವೀರಪ್ಪನ್ ಅಡಗುತಾಣದಿದ ಚೆನ್ನೈಗೆ ಬಂದ ಈ ಹೊಸ ಕ್ಯಾಸೆಟ್ ಅನ್ನು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿಗೆ ತಂದಿದ್ದು, ಕ್ಯಾಸೆಟ್ನಲ್ಲಿ ಇರುವ ಬೇಡಿಕೆಯ ಅಂಶಗಳನ್ನು ರಾಜ್ಕುಮಾರ್ ಕುಟುಂಬದವರು ಬಹಳ ಎಚ್ಚರಿಕೆಯಿಂದ ಆಲಿಸಿದ್ದಾರೆ. ಈ ಕ್ಯಾಸೆಟ್ನಲ್ಲಿನ ಅಂಶಗಳು ತಿಳಿದ ನಂತರವಂತೂ ರಾಜ್ಕುಮಾರ್ ಮನೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ರಾಜ್ ಮನೆಯಲ್ಲಿ ಖೋಡೆ ಪ್ರತ್ಯಕ್ಷ : ವೀರಪ್ಪನ್ 50 ಕೋಟಿ ರುಪಾಯಿ ಬೇಡಿಕೆ ಇಟ್ಟಿದ್ದಾನೆ ಎಂಬುದನ್ನು ಖಾತ್ರಿ ಪಡಿಸಲೋ ಎಂಬಂತೆ ಖ್ಯಾತಿ ಉದ್ಯಮಿ ಹಾಗೂ ಲಿಕ್ಕರ್ ದೊರೆ ಹರಿ ಖೋಡೆ ಅವರು ಶನಿವಾರ ಮಧ್ಯಾಹ್ನ ರಾಜ್ಕುಮಾರ್ ಅವರ ಮನೆಯಲ್ಲಿ ಪ್ರತ್ಯಕ್ಷರಾಗಿದ್ದರು. ಶುಕ್ರವಾರವೇ ಚೆನ್ನೈ ತಲುಪಿದ ಕ್ಯಾಸೆಟ್ನಲ್ಲಿರುವ ಅಂಶಗಳನ್ನು ಹೊರಗೆಡವಲು ಕರುಣಾನಿಧಿ ಅವರು ಬಹುತೇಕ ಒಂದು ದಿನ ಕಾಲಾವಕಾಶ ತೆಗೆದುಕೊಂಡ ನಂತರ ಹೊಸ ಬೇಡಿಕೆ, ಹೊಸ ಗಡುವಿನ ಪ್ರಸ್ತಾಪಗಳನ್ನು ವಿಶ್ವಸನೀಯ ನಂಬಲರ್ಹ ಮೂಲಗಳು ಹೊರಗೆಡುಹಿವೆ.
ಬಲಿಷ್ಠ ಬೇಡಿಕೆಗಳು : ಈ ಭಾರಿ ಮೊತ್ತದ ಬೇಡಿಕೆಯ ಜತೆಗೇ ವೀರಪ್ಪನ್ ಕಳುಹಿಸಿರುವ ಕ್ಯಾಸೆಟ್ನಲ್ಲಿ ಇನ್ನಿತರ ಬೇಡಿಕೆಗಳೂ ಇದ್ದು, ಈ ಎಲ್ಲ ಬೇಡಿಕೆಗಳೂ ಬಹಳ ಬಲಯುತವಾಗಿವೆ ಎಂದು ಮೂಲಗಳು ತಿಳಿಸಿವೆ. ಈ ಬೇಡಿಕೆಗಳು ತಿರುವಳ್ಳವರ್ ಪ್ರತಿಮೆ, ಆಕಾಶವಾಣಿ ಮೂಲಕ ತತ್ಕ್ಷಣವೇ ಸಂದೇಶ ರವಾನೆ, 51 ಟಾಡಾ ಬಂದಿಗಳ ಬಿಡುಗಡೆಯೂ ಸೇರಿದಂತೆ ಇನ್ನಿತರ ಹೊಸ ಬೇಡಿಕೆಗಳನ್ನೂ ಒಳಗೊಂಡಿದೆ.
ಹೇಳಿದಷ್ಟು ಮಾಡುವಂತೆ ಗೋಪಾಲ್ಗೆ ಆರ್ಡರ್ : ಹೆಚ್ಚಿಗೆ ಮಾತನಾಡದೆ ಬಾಯಿಮುಚ್ಚಿಕೊಂಡು ಪೋಸ್ಟ್ ಮ್ಯಾನ್ ಕೆಲಸವನ್ನಷ್ಟೇ ಮಾಡುವಂತೆ ಗೋಪಾಲ್ಗೆ ಉಗ್ರನಾಯಕ ಮಾರನ್ ಸೂಚಿಸಿದ್ದಾನಂತೆ. ಈಗ ಎಂತಹ ಸ್ಥಿತಿ ನಿರ್ಮಾಣವಾಗಿದೆಯೆಂದರೆ ವೀರಪ್ಪನೇ ತಮಿಳು ಉಗ್ರಗಾಮಿಗಳ ಕೈಗೊಂಬೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಕೃಷ್ಣ ಅವರು ರಾಜ್ಯ ಸರಕಾರ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದು, ಉಳಿದದ್ದು ಗೋಪಾಲ್ ಅವರಿಗೆ ಬಿಟ್ಟಿದೆ ಎಂದು ಶನಿವಾರ ಹೇಳಿದ್ದಾರೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ, ಗೋಪಾಲ್ ಅವರ ಮನವೊಲಿಕೆಯ ಮಾತುಗಳಿಂದ ಮಾತ್ರವೇ ಬೇಳೆಕಾಳು ಬೇಯುವಂತೆ ಕಾಣಬರುತ್ತಿಲ್ಲ.