ಮಂಗಳೂರು ಪವರ್ ಪ್ರೊಜೆಕ್ಟ್ ಪ್ರಸ್ತಾ-ವ-ನೆ ಪರಿಶೀಲನೆಗೆ ಸಮಿತಿ
ಬೆಂಗಳೂರು : ಕೊಜೆಂಟ್ರಿಕ್ಸ್ ಕಂಪೆನಿ ಕೈ ಬಿಟ್ಟಿರುವ ನಂದಿಕೂರು ಪವರ್ ಪ್ರಾಜೆಕ್ಟ್ ನ್ನು ಕೈಗೆತ್ತಿಕೊಳ್ಳಲು ಮುಂದಾಗಿರುವ ಮಂಗಳೂರು ಪವರ್ ಪ್ರಾಜೆಕ್ಟ್ನ ಪ್ರಸ್ತಾವನೆಯನ್ನು ಪರಿಶೀಲಿಸಲು ಸರಕಾರ ನಾಲ್ಕು ಮಂದಿ ಸದಸ್ಯರ ಸಮಿತಿ ನೇಮಿಸಿದೆ ಎಂದು ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಸಂಪನ್ಮೂಲ ಕಾರ್ಯದರ್ಶಿ, ಹಣಕಾಸು ಆಯುಕ್ತ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷರು ಸಮಿತಿಯಲ್ಲಿರುತ್ತಾರೆ. ಆದರೆ ಸಮಿತಿಗೆ ವರದಿ ಸಲ್ಲಿಸಲು ಸಮಯ ನಿಗದಿ ಪಡಿಸಿಲ್ಲ ಎಂದು ಕೃಷ್ಣ ಹೇಳಿದರು. ಯೋಜನೆಯ ಬಗ್ಗೆ ಟಾಟಾ ಇಲೆಕ್ಟ್ರಾನಿಕ್ಸ್ನ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಕಲಾ ಬಾಳಿಗಾ ಮತ್ತು ಮಂಗಳೂರು ಪವರ್ ಕಂಪೆನಿಯ ನಿರ್ವಾಹಕ ನಿರ್ದೇಶಕ ವಿ.ಪಿ. ಶರ್ಮ ಮುಖ್ಯಮಂತ್ರಿಗಳಿಗೆ ಯೋಜನೆಯ ಕುರಿತು ವಿವರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರಕಾರವು ಆದಷ್ಟು ಬೇಗ ಪ್ರಸ್ತಾವನೆಯನ್ನು ಪರಿಶೀಲಿಸಿ ಅನುಮತಿ ನೀಡುವುದಾಗಿ ತಿಳಿಸಿದೆ, ಇನ್ನು ಹತ್ತು ಹನ್ನೆರಡು ದಿನಗಳೊಳಗಾಗಿ ಸರಕಾರದ ನಿರ್ಧಾರ ಹೊರಬೀಳುವುದು ಎಂದರು. ಯೋಜನೆಗಾಗಿ ಕಂಪೆನಿಯು ಸುಮಾರು 130 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಅಲ್ಲದೆ ಪ್ರತಿ ಯೂನಿಟ್ ವಿದ್ಯುತ್ಗೆ ಅತೀ ಕಡಿಮೆ ದರ ನಿಗದಿ ಪಡಿಸಿದ್ದು ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಂಪೆನಿಯು ಯಾವುದೇ ಮರು ಪರಿಶೀಲನೆ ನಡೆಸುವುದಿಲ್ಲ ಎಂದು ಹೇಳಿದರು.
ಅಮೆರಿಕಾದ ಕೊಜೆಂಟ್ರಿಕ್ಸ್ ಕಂಪೆನಿಯು ಕೈ ಬಿಟ್ಟಿರುವ ಒಂದು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಯೋಜನೆಯನ್ನು ತಾನು ಕೈಗೆತ್ತಿಕೊಳ್ಳುವುದಾಗಿ ಮಂಗಳೂರು ಪವರ್ ಪ್ರೊಜೆಕ್ಟ್ ಕಂಪೆನಿಯು ಹೊಸ ಪ್ರಸ್ತಾವನೆಯನ್ನು ಶನಿವಾರ ರಾಜ್ಯ ಸರಕಾರದ ಮುಂದಿಟ್ಟಿತ್ತು. ಸಿ ಎಲ್ಪಿ ಇಂಟರ್ನ್ಯಾಷನಲ್ ಮತ್ತು ಟಾಟಾ ಇಲೆಕ್ಟ್ರಾನಿಕ್ಸ್ ಕಂಪೆನಿಯ ಸಹಯೋಗದಲ್ಲಿ ನಂದಿಕೂರ್ ಪ್ರಾಜೆಕ್ಟ್ ಯೋಜನೆಯನ್ನು ರೂಪಿಸಲಾಗಿದೆ.
(ಯುಎನ್ಐ)