ಟಾಡಾ ಆರೋಪಿಗಳ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ನಕಾರ
ಬೆಂಗಳೂರು : 51 ಟಾಡಾ ಬಂದಿತರಿಗೆ ಮೈಸೂರು ನ್ಯಾಯಾಲಯ ನೀಡಿದ್ದ ಜಾಮೀನು ಮಂಜೂರಾತಿಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಕೊಟ್ಟಿದ್ದ ತಡೆಯಾಜ್ಞೆಯನ್ನು ಶುಕ್ರವಾರ ಸ್ಥಿರೀಕರಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಪಿ. ಬರೂಚ, ಡಿ.ಪಿ. ಮಹಾಪಾತ್ರ ಮತ್ತು ವೈ.ಕೆ. ಸಬರ್ವಾಲ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಮಂಗಳವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ತಡೆಯನ್ನು ಮುಂದುವರಿಸಿದ್ದೇ ಅಲ್ಲದೆ, ಮುಂದಿನ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ತೀರ್ಮಾನಕ್ಕೆ ಬಿಟ್ಟಿದೆ.
ರಾಜ್ಕುಮಾರ್ ಬಿಡುಗಡೆ ಪ್ರಕ್ರಿಯೆಗೆ ಈ ತೀರ್ಪಿನಿಂದ ಹಿನ್ನಡೆ ಉಂಟಾಗಿದ್ದು, ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ರಾಜ್ ಅಪಹರಣ ಪ್ರಕರಣವನ್ನು ಮತ್ತಾವುದೇ ಜನಾಂಗೀಯ ಘರ್ಷಣೆಗಳಿಗೆ ಅವಕಾಶ ನೀಡದಂತೆ ಸುಸೂತ್ರವಾಗಿ ಬಗೆಹರಿಸಲು ಟೊಂಕಕಟ್ಟಿ ನಿಂತಿದ್ದ ರಾಜ್ಯ ಸರಕಾರಕ್ಕೆ ಈ ತೀರ್ಪಿನಿಂದ ಭಾರಿ ನಿರಾಶೆ ಆಗಿದೆ.
ಎರಡೂ ರಾಜ್ಯಗಳು ವೀರಪ್ಪನ್ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಶಕ್ತಿಮೀರಿ ಪ್ರಯತ್ನಗಳನ್ನು ನಡೆಸಿದ್ದರೂ, ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಈ ಎಲ್ಲ ಪ್ರಯತ್ನಗಳೂ ನಿಶ್ಫಲವಾಗಿವೆ. ಈ ತೀರ್ಪಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ಟಾಡಾ ಬಂದಿಗಳ ಬಿಡುಗಡೆ, ರಾಜ್ಯ ಸರಕಾರದ ಕೈಮೀರಿ ಹೋಗಿರುವುದರಿಂದ ಹಾಗೂ ನಾವು ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಅರ್ಥೈಸಿಕೊಂಡು ರಾಜ್ಕುಮಾರ್ ಹಾಗೂ ಇತರರನ್ನು ಬಿಡುಗಡೆ ಮಾಡುವಂತೆ ಗೋಪಾಲ್ ಅವರು ವೀರಪ್ಪನ್ ಮನವೊಲಿಸಲಿದ್ದಾರೆ ಎಂದೂ ಹೇಳಿದರು.