ಸುಪ್ರೀಂ ಕೋರ್ಟ್ ತೀರ್ಪಿನಿಂದ ರಾಜ್ ಬಿಡುಗಡೆ ವಿಳಂಬ : ಕೃಷ್ಣ
ಬೆಂಗಳೂರು : ಸರ್ವೋಚ್ಚ ನ್ಯಾಯಾಲಯ ಟಾಡಾ ಆರೋಪಿಗಳನ್ನು ಷರತ್ತಿನ ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ನೀಡಿರುವ ಅನಿರ್ದಿಷ್ಟ ಕಾಲದ ತಡೆಯಾಜ್ಞೆಯಿಂದಾಗಿ ರಾಜ್ಕುಮಾರ್ ಅವರ ಬಿಡುಗಡೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎಂಬುದನ್ನು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಒಪ್ಪಿಕೊಂಡಿದ್ದಾರೆ.
ಸರ್ವೋನ್ನತ ನ್ಯಾಯಾಲಯದ ತ್ರಿಸದಸ್ಯ ಪೀಠ ಶುಕ್ರವಾರ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಕೃಷ್ಣ ಅವರು, ನ್ಯಾಯಾಲಯ ನೀಡಿರುವ ತೀರ್ಪಿಗೆ ಸರಕಾರ ತಲೆಬಾಗುತ್ತದೆ ಎಂದು ತಿಳಿಸಿದರು.
ಮುಂದಿನ ಕ್ರಮಗಳ ಬಗ್ಗೆ ಚಿಂತಿಸುವ ಮುನ್ನ ರಾಜ್ಯ ಸರಕಾರವು ಸರ್ವೋನ್ನತ ನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡುತ್ತದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ದೆಹಲಿಗೆ ಧಾವಿಸಿದ್ದ ರಾಜ್ಯದ ಅಡ್ವೊಕೇಟ್ ಜನರಲ್ ಎ.ಎನ್. ಜಯರಾಂ ಅವರು ಶುಕ್ರವಾರ ಸಂಜೆ ಅಥವಾ ರಾತ್ರಿ ರಾಜ್ಯಕ್ಕೆ ಮರಳಲಿದ್ದಾರೆ.
ಈ ತೀರ್ಪಿನಿಂದ ತೊಂದರೆಯಾಗದು : ಶುಕ್ರವಾರ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಗೋಪಾಲ್ - ವೀರಪ್ಪನ್ ನಡುವಣ ಸಂಧಾನ ಮಾತುಕತೆಯ ಮೇಲೆ ಪ್ರತೀಕೂಲ ಪರಿಣಾಮ ಬೀರುವುದಿಲ್ಲ ಎಂಬ ಆಶಾಭಾವನೆಯನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಡಿ . ಬಿ. ಚಂದ್ರೇಗೌಡ ವ್ಯಕ್ತಪಡಿಸಿದ್ದಾರೆ.
ತೀರ್ಪಿನ ಪೂರ್ಣಪಾಠ ತಮ್ಮ ಕೈಗೆ ಬಂದಮೇಲೆ ಮುಂದಿನ ಕ್ರಮದ ಬಗ್ಗೆ ಆಲೋಚನೆ ಮಾಡಲಾಗುತ್ತದೆ ಎಂದಿರುವ ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ ಎಂದು ಹೇಳಿದರು. ವೀರಪ್ಪನ್ನನ್ನು ಸೆರೆ ಹಿಡಿಯುವಲ್ಲಿ ಸರಕಾರ ವಿಫಲವಾಗಿದೆ ಎಂಬ ನ್ಯಾಯಾಲಯದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಚಂದ್ರೇಗೌಡ, ಬಿಕ್ಕಟ್ಟಿನ ಸಂದರ್ಭವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಸರಕಾರ ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
(ಯುಎನ್ಐ)