ಪೊಲೀಸ್ ಕಾವಲಿನಲ್ಲಿ ಆರಂಭವಾದ ಚಲನಚಿತ್ರ ಮನರಂಜನೆ
ಬೆಂಗಳೂರು : ರಾಜ್ಕುಮಾರ್ ಅಪಹರಣದ ಹಿನ್ನೆಲೆಯಲ್ಲಿ ಕಳೆದ 33 ದಿನಗಳಿಂದ ಮುಚ್ಚಿದ್ದ ಚಿತ್ರಮಂದಿರಗಳು ವಿಘ್ನನಿವಾರಕನಾದ ಗಣಪನ ಪೂಜಿಸಿ, ಯಾವುದೇ ವಿಘ್ನ ಆಗದಂತೆ ಕೋರಿ ಶುಕ್ರವಾರದಿಂದ ಪ್ರದರ್ಶನ ಆರಂಭಿಸಿವೆ.
ಹತ್ತು ಹಲವು ಚಿತ್ರಮಂದಿರಗಳಿರುವ ಗಾಂಧೀನಗರದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಚಿತ್ರಪ್ರದರ್ಶನ ಆರಂಭಗೊಂಡಿತಾದರೂ, ಪ್ರೇಕ್ಷಕರೇ ಇರಲಿಲ್ಲ. ಕೇವಲ ಬೆರಳೆಣಿಕೆಯಷ್ಟು ಪ್ರೇಕ್ಷಕರಿಗೇ ಪ್ರದರ್ಶನ ನಡೆಸುವಂತಾಯಿತು.
ಕೆಲವು ಚಿತ್ರ ಮಂದಿರಗಳ ಮಾಲಿಕರು, ವಾಣಿಜ್ಯ ಮಂಡಳಿ ಶುಕ್ರವಾರದಿಂದ ಪ್ರದರ್ಶನ ಆರಂಭಿಸುವಂತೆ ತಿಳಿಸಿದ್ದಾಗ್ಯೂ ಕೂಡ ರಾಜ್ಕುಮಾರ್ ಬರುವತನಕ ಚಿತ್ರ ಪ್ರದರ್ಶನ ನಡೆಸದಿರುವ ನಿರ್ಧಾರ ತಳೆದಿದ್ದಾರೆ. ಶುಕ್ರವಾರ ಚಿತ್ರ ಪ್ರದರ್ಶನ ಆರಂಭವಾದರೂ ಕೂಡ, ಗಣೇಶನ ಹಬ್ಬದ ಸಡಗರ ಹಾಗೂ ಗಲಭೆ ಆದೀತೆಂಬ ಭಯದಿಂದ ಪ್ರೇಕ್ಷಕರು ಚಿತ್ರ ಮಂದಿರಗಳ ಕಡೆ ಸುಳಿಯಲೇ ಇಲ್ಲ.
ಚಿತ್ರಪ್ರದರ್ಶನ ಆರಂಭಿಸುವಂತೆ ಮಂಡಳಿಯ ಮೇಲೆ ಒತ್ತಡ ಹೇರಿದ ಪ್ರದರ್ಶಕರು ವಿಧಿ ಇಲ್ಲದೆ ಹಾಗೂ ತಮ್ಮ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನ ಆರಂಭಿಸಿಯೇ ಬಿಟ್ಟಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದೆ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಚಿತ್ರ ಪ್ರದರ್ಶನ ಆರಂಭಿಸಿದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಗಿಬಿದ್ದು ವಿಮೆ: ಈ ವರೆಗೆ ತಮ್ಮ ಚಿತ್ರಮಂದಿರಗಳಿಗೆ ವಿಮೆ ಮಾಡಿಸದಿದ್ದ ಮಾಲಿಕರು, ಶುಕ್ರವಾರ ಚಿತ್ರಪ್ರದರ್ಶನ ಆರಂಭಿಸುವ ಹಿನ್ನೆಲೆಯಲ್ಲಿ, ತಮ್ಮ ಆಸ್ತಿ ಪಾಸ್ತಿಗೆ ಹಾನಿಯಾದೀತೆಂಬ ಭಯದಲ್ಲಿ ಮುಗಿಬಿದ್ದು ವಿಮೆ ಮಾಡಿಸುತ್ತಿದ್ದಾರೆ.