ನಗರದಲ್ಲಿ ಗಣೇಶ ಹಬ್ಬಕ್ಕೆ ಮಳೆ ಭೀತಿ ಇಲ್ಲ
ಬೆಂಗಳೂರು : ಒಂದು ಕಡೆ ಅನಾವೃಷ್ಟಿ, ಮತ್ತೊಂದೆಡೆ ಅತಿವೃಷ್ಟಿ. ಮಳೆ ಬಯಸುವ ಕಡೆಯಲ್ಲಿ ಮಳೆಯೇ ಬರುವುದಿಲ್ಲ. ಇನ್ನು ಕೆಲವೆಡೆ ಸಾಕು ಸಾಕೆಂದರೂ ಮಳೆರಾಯ ನಿಲ್ಲುವುದಿಲ್ಲ. ಬಿಹಾರದ ಕೆಲವು ಪ್ರದೇಶಗಳು ಬರದಿಂದ ತತ್ತರಿಸುತ್ತಿವೆ. ಇತ್ತ ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಅಂತಹ ಪ್ರಕೃತಿ ಪ್ರಕೋಪ ಕಂಡು ಬಂದಿಲ್ಲ. ಬರುವುದೂ ಬೇಡ. ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಬಹುತೇಕ ಎಲ್ಲೆಡೆ ಮಳೆ ಬಿದ್ದಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲಿ ಮಳೆಯಾಗಿದೆ. ಬಾಗಮಂಡಲದಲ್ಲಿ ಅತಿ ಹೆಚ್ಚು ಎಂದರೆ 7 ಸೆಂಟಿ ಮೀಟರ್ ಮಳೆ ಬಿದ್ದಿದೆ. ಆಗುಂಬೆಯಲ್ಲಿ 5, ಶೃಂಗೇರಿಯಲ್ಲಿ 3, ಬಾಗಲಕೋಟೆ, ಬೆಳಗಾವಿ, ಕೊಪ್ಪ, ಕಮ್ಮರಡಿ, ಬೆಳ್ತಂಗಡಿ, ಜಗಲ್ಬೆಟ್, ಲೋಂಡಾಗಳಲ್ಲಿ ತಲಾ 2, ಧರ್ಮಸ್ಥಳ, ಕಾರ್ಕಳ, ಬೆಳಗಾವಿ ವಿಮಾನ ನಿಲ್ದಾಣ, ಸಂಕೇಶ್ವರ, ಲಕ್ಕುಂಡಿ, ತರೀಕೆರೆ, ಮದಾಪುರಗಳಲ್ಲಿ ತಲಾ 1 ಸೆಂಟಿ ಮೀಟರ್ಮಳೆ ಬಿದ್ದಿದೆ.
ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಹಾಗೂ ಒಳನಾಡಿನ ಅಲ್ಲಲ್ಲಿ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ನಿರೀಕ್ಷೆ ಇದೆ. ಸ್ಥಳೀಯ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಆದರೆ, ಮಳೆ ಸುಳಿಯುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂದರೆ ಬೆಂಗಳೂರು ನಗರ ವಾಸಿಗಳು ಮಳೆಯ ತೊಡಕಿಲ್ಲದೆ ಆನಂದದಿಂದ ಗಣೇಶಚತುರ್ಥಿ ಆಚರಿಸಬಹುದು.