ಅತ್ತ ಜ್ವಾಲೆ ಇತ್ತ ಮಳೆ - ಇಳೆಯ ವಿಚಿತ್ರ
ಬೆಂಗಳೂರು :ವಿಜ್ಞಾನ - ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೂಡ ಮಾನವ ಪ್ರಕೃತಿಯ ವಿರುದ್ಧ ಸೆಣಸಲಾರ, ಸೆಣಸಿ ಗೆಲ್ಲಲಾರ ಎಂಬ ಮಾತು ಅಕ್ಷರಶಃ ಸತ್ಯ. ಅತ್ತ ಜಪಾನ್ನ ಟೋಕಿಯೋದಿಂದ 180 ಕಿ.ಮೀಟರ್ ದೂರದಲ್ಲಿರುವ ಮಿಯಾಕಿಜಿಮಾ ದ್ವೀಪದಲ್ಲಿ ಮುಗಿಲಿನೆತ್ತರಕ್ಕೆ ಜ್ವಾಲಾಮುಖಿ ಚಿಮ್ಮಿದೆ. ಇತ್ತ ನೆರೆಯ ಆಂಧ್ರಪ್ರದೇಶದಲ್ಲಿ ಮಳೆಯ ಆರ್ಭಟಕ್ಕೆ ಉಕ್ಕಿ ಹರಿಯುತ್ತಿರುವ ನದಿಗಳು ನೂರಾರು ಜನರನ್ನು ಬಲಿತೆಗೆದುಕೊಂಡಿವೆ.
ಮಳೆಯನ್ನು, ಬೆಂಕಿಯನ್ನು ನಿಯಂತ್ರಿಸುವುದು ಸಾಧ್ಯವೇ? ರಾಜ್ಯದಲ್ಲಿ ಭಾರಿ ಅನಾಹುತ ಆಗುವ ಹಾಗೆ ಮಳೆಯಾಗಿಲ್ಲವಾದರೂ, ನಾಲ್ಕಾರು ಜೀವಗಳನ್ನು ಮಳೆ ಬಲಿ ತೆಗೆದುಕೊಂಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿಯಲ್ಲಿ ಮುಂಗಾರು ಚುರುಕಾಗಿತ್ತು. ಅಂಕೋಲ, ಕಮ್ಮರಡಿಗಳಲ್ಲಿ ತಲಾ 7 ಸೆಂಟಿ ಮೀಟರ್, ಭಟ್ಕಳ, ಶಿರಾಳಿಗಳಲ್ಲಿ ತಲಾ 6 ಸೆಂಟಿ ಮೀಟರ್, ಕುಮಟಾದಲ್ಲಿ 5, ಹೊನ್ನಾವರ, ತೀರ್ಥಹಳ್ಳಿ, ಆನಂತದಾಪುರಗಳಲ್ಲಿ ತಲಾ 4, ಕಾರವಾರ, ಕೊಪ್ಪದಲ್ಲಿ 3, ಧರ್ಮಸ್ಥಳ, ಮಂಚಿಕೇರಿ, ಕೋಲಾರ, ಮೂರ್ನಾಡು, ಭಾಗಮಂಡಲ, ಮೂಡಿಗೆರೆಗಳಲ್ಲಿ ತಲಾ 2 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಮುಂದಿನ 48 ಗಂಟೆಗಳ ಮುನ್ಸೂಚನೆಯಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಗುಡುಗು ಸಹಿತ ಸುರಿಮಳೆ ಬೀಳುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡು ಬರುವುದಿಲ್ಲ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಒಂದೆರಡು ಬಾರಿ ಹಗುರದಿಂದ ಮಳೆ ಸುರಿಯುವ ಸಾಧ್ಯತೆ ಇದೆ.