ಮಳೆಯ ನಡುವೆಯೂ ಬಣ್ಣ ಕಳೆದು ಕೊಳ್ಳದ ‘ವಿಟ್ಲಪಿಂಡಿ’
ಉಡುಪಿ : ಮಳೆಯ ಆರ್ಭಟದ ನಡುವೆಯೂ ದೇವಾಲಯದ ಪಟ್ಟಣ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವವಾದ ‘ವಿಟ್ಲಪಿಂಡಿ’ಯನ್ನು ಸಾಂಪ್ರದಾಯಿಕ ಸಡಗರ ಉತ್ಸಾಹದೊಂದಿಗೆ ಆಚರಿಸಲಾಯಿತು.
ಉಡುಪಿ ಪರ್ಯಾಯ ಪೀಠಾ-ಧೀಶ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಇತರ ಯತಿಗಳು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪೂಜಿಸಿದ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ ವಿಟ್ಲಪಿಂಡಿ ಉತ್ಸವಕ್ಕೆ ಚಾಲನೆ ನೀಡಿದರು. ಪಲ್ಲಕ್ಕಿಯನ್ನು ಗರ್ಭಗುಡಿಗೆ ಒಂದು ಪ್ರದಕ್ಷಿಣೆ ಹಾಕಿದ ನಂತರ ರಥ ಬೀದಿಗೆ ತರಲಾಯಿತು. ಶ್ರೀಕೃಷ್ಣ ದೇವಾಲಯದ ಮುಖಮಂಟಪದೆದುರು ವಿಗ್ರಹವನ್ನು ಪುಷ್ಪಾಲಂಕೃತ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು.
ವಿಟ್ಲಪಿಂಡಿಯಂದು ರಥಬೀದಿಯ ತುಂಬಾ ವೇಷಗಳದ್ದೇ ಅಬ್ಬರ. ಮಳೆಯೂ ಆಗಾಗ ಬಿಡುವುಕೊಟ್ಟು ಜನರ ಉತ್ಸಾಹ ಗರಿಗೆದರುವಂತೆ ಮಾಡುತ್ತಿತ್ತು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಗೊಲ್ಲರ ವೇಷ, ಹುಲಿವೇಷ, ಶ್ರೀಕೃಷ್ಣ ವೇಷ ಮತ್ತಿತರ ಜನಪದ ವೇಷಗಳನ್ನು ಪ್ರದರ್ಶಿಸಲಾಯಿತು. ತಾತ್ಕಾಲಿಕವಾಗಿ ನಿರ್ಮಿಸಿದ್ದ ವೇದಿಕೆಗಳಲ್ಲಿ ಹುಲಿವೇಷ ಧಾರಿಗಳು ಪ್ರದರ್ಶನ ನೀಡಿದರು. ಮರಗಾಲು ಹುಲಿವೇಷ ವಿಶೇಷ ಆಕರ್ಷಣೆಯಾಗಿತ್ತು. ಉಡುಪಿಯಲ್ಲಿ ವೇಷ ಹಾಕುವುದು ಕೆಲವರ ಹರಕೆಯಾದರೆ, ಇನ್ನು ಕೆಲವರಿಗೆ ಸಂಪಾದನೆಯ ದಾರಿ. ಯಾಕೆಂದರೆ ವೇಷ ಹಾಕಿದ ಎ-ಲ್ಲರಿಗೂ ಪರ್ಯಾಯ ಮಠಾಧೀಶರು ಕಾಣಿಕೆ ನೀ-ಡಿ-ದ-ರು.
ನೀಲಿ ಬಣ್ಣ ಬಳಿದುಕೊಂಡ ಗೊಲ್ಲರು, ಎತ್ತರದಲ್ಲಿ ಕಟ್ಟಿದ್ದ ಮೊಸರು ಮಡಿಕೆಯನ್ನು ಉದ್ದನೆಯ ಕೋಲಿನಿಂದ ಒಡೆಯುವ ಆಚರಣೆ ಉತ್ಸವದ ಕೇಂದ್ರ ಬಿಂದು. ಇದಕ್ಕೆ ‘ಮೊಸರು ಕುಡಿಕೆ ಹಬ್ಬ’ ಎಂಬ ಹೆಸರೂ ಇದೆ.
ಸಂಜೆ ಮದ್ಯ ಸರೋವರದಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ವಿಸರ್ಜಿಸುವ ಮೂಲಕ ವಿಟ್ಲಪಿಂಡಿ ಉತ್ಸವಕ್ಕೆ ಮಂಗಳ ಹಾಡಲಾಯಿತು.
(ಉಡು-ಪಿ ಪ್ರತಿ-ನಿ-ಧಿ-ಯಿಂ-ದ)
ಮುಖಪುಟ / ಊರು ಕೇರಿ