ತನ್ನ 129 ಸಹಚರರ ಟಾಡಾ ಕೇಸು ಕೈಬಿಡಲು ವೀರಪ್ಪನ್ ಸೂಚನೆ
ಚೆನ್ನೈ : ಈಗ ವೀರಪ್ಪನ್ ಬೇಡಿಕೆ ಬದಲಾಗಿದೆ. ಕೇವಲ 5 ಉಗ್ರಗಾಮಿಗಳಷ್ಟೇ ಅಲ್ಲ, ಬಂಧಿತರಾಗಿರುವ ಅವನ 129 ಸಹಚರರ ಮೇಲಿನ ಟಾಡಾ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕಂತೆ.
ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಅವನ ಈ ಬೇಡಿಕೆಗಳಿಗೂ ಒಪ್ಪಿದ್ದು, ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಅನ್ವಯ ಮಾತ್ರ ಶಿಕ್ಷೆ ನೀಡಲು ನಿರ್ಧರಿಸಿವೆ. ಟಾಡಾ ಅನ್ವಯ ಆಗುವ ಶಿಕ್ಷೆಗಿಂತ ಐಪಿಸಿ ಪ್ರಕಾರ ಆಗುವ ಶಿಕ್ಷೆ ಕಡಿಮೆ. ಜತೆಗೆ ಟಾಡಾ ಮೊಕದ್ದಮೆಗಳಿಂದ ಮುಕ್ತರಾದ ಎಲ್ಲಾ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಾಡಿಗೆ ಹೋಗಲೊಲ್ಲದ 4 ಉಗ್ರಗಾಮಿಗಳು : ರಾಜ್ ಬದಲಿಗೆ ಬಿಡುಗಡೆ ಮಾಡಬೇಕೆಂದು ವೀರಪ್ಪನ್ ಒತ್ತಾಯಿಸಿದ್ದ 5 ಟಿಎನ್ಎಲ್ಎ ಉಗ್ರಗಾಮಿಗಳಲ್ಲಿ ನಾಲ್ವರಿಗೆ ಕಾಡಿಗೆ ಹೋಗಲು ಇಷ್ಟವಿಲ್ಲವಂತೆ. ಹಾಗಂತ ಅವರ ಮಾತಾಪಿತೃಗಳು ಹೇಳಿದ್ದಾರೆ. ಆದರೆ ಐವರು ಉಗ್ರರ ಪೈಕಿ ಒಬ್ಬನಾದ ರೇಡಿಯೋ ವೆಂಕಟೇಶನ್ ಕಾಡಿಗೆ ಹೋಗಿ ವೀರಪ್ಪನ್ ಜತೆಗೂಡಲು ತುದಿಗಾಲಲ್ಲಿ ನಿಂತಿದ್ದಾನೆ. ಅವನ ಪ್ರಕಾರ, ಉಳಿದ ನಾಲ್ವರೂ ತನ್ನೊಂದಿಗೆ ವೀರಪ್ಪನ್ ತಂಡಕ್ಕೆ ಸೇರಲಿದ್ದಾರೆ. ತಿರುಚಿ ಜೈಲಿನಲ್ಲಿದ್ದ ಅವರ ವಿರುದ್ಧದ ಟಾಡಾ ಮೊಕದ್ದಮೆಗಳನ್ನು ಮಾತ್ರ ಹಿಂದೆಗೆದುಕೊಳ್ಳುಲು ಸರಕಾರ ತೀರ್ಮಾನಿಸಿದಾಗ, ಉಗ್ರರು ಜಾಮೀನಿಗೆ ಅರ್ಜಿ ಸಲ್ಲಿಸಲು ಒಪ್ಪಲಿಲ್ಲ ಹೀಗಾಗಿ, ತಮಿಳುನಾಡು ಸರ್ಕಾರ ಅವರ ವಿರುದ್ಧದ ಎಲ್ಲಾ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಬಗೆಗೆ ಈಗ ಪರಿಶೀಲಿಸುತ್ತಿದೆ.
ಐವರು ಉಗ್ರಗಾಮಿಗಳಲ್ಲಿ ಒಬ್ಬನಾದ ಸತ್ಯಮೂರ್ತಿಯ ತಂದೆ ಹೀಗೆನ್ನುತ್ತಾರೆ- ‘ನನ್ನ ಮಗ ಹೇಳುವಂತೆ ಪೆರವೈ (ವೀರಪ್ಪನ್) ತನ್ನ ವಿಚಾರವನೆಲ್ಲಾ ಎಲ್ಲಿ ಹೇಳಿಬಿಡ್ತಾನೋ ಅಂತ ಅವನನ್ನು ಕಾಡಿಗೆ ವಾಪಸ್ಸು ಕರೆಸಿಕೊಳ್ಳುತ್ತಿದ್ದಾನೆ.
ಸರ್ಕಾರ ಅರ್ಜಿ ಸಲ್ಲಿಸಿಲ್ಲ : ರೇಡಿಯೋ ವೆಂಕಟೇಶನ್ನನ್ನು ಗುರುವಾರ ಚೆನ್ನೈ ಹೈಕೋರ್ಟಿನ ನ್ಯಾಯಮೂರ್ತಿ ಎಂ.ಚಿನ್ನಪಾಂಡಿ ಮುಂದೆ ಹಾಜರು ಪಡಿಸಲಾಯಿತು. ಸರ್ಕಾರ ಅವನ ವಿರುದ್ಧದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಅರ್ಜಿ ಸಲ್ಲಿಸುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ಅಂಥ ಯಾವ ಅರ್ಜಿಯನ್ನೂ ಸರ್ಕಾರ ಸಲ್ಲಿಸಲಿಲ್ಲ. ಹೀಗಾಗಿ ನ್ಯಾಯಮೂರ್ತಿ 1993ರಲ್ಲಿ ನಡೆಸಿದ ಬಾಂಬ್ ಸ್ಫೋಟದ ಆಪಾದನೆಯ ಮೇಲೆ ವೆಂಕಟೇಶನ್ ಮತ್ತು ಇತರ 8 ಜನರಿಗೆ ನೀಡುತ್ತಿರುವ ಶಿಕ್ಷೆಯನ್ನು ಮುಂದುವರೆಸುವಂತೆ ತೀರ್ಪಿತ್ತರು.
ಉಗ್ರಾಮಿಗಳ ಕುಟುಂಬದ ಹಿನ್ನೆಲೆ : ವೆಂಕಟೇಶನ್ ಸ್ನಾತಕ್ತೋತರ ಪದವಿಧರ. ಆತನ ತಂದೆ ಒಬ್ಬ ತಹಸೀಲ್ದಾರ್. ಮತ್ತೊಬ್ಬ ಉಗ್ರಗಾಮಿ ಪೊನ್ನಿವೇಲನ್ ತಂದೆ ಹಿಂದೊಮ್ಮೆ ಮುನಿಸಿಪಲ್ ಕೌನ್ಸಿಲರ್ ಆಗಿದ್ದವರು. ತಮ್ಮ ಮಗ ಬಿಡುಗಡೆಯಾಗುವ ಬಗೆಗೆ ಅವರಿಗೆ ನಂಬಿಕೆಯೇ ಇಲ್ಲ. ಹಿಂದೆ ತಮಗಾಗಿರುವ ಅನ್ಯಾಯಗಳ ವಿರುದ್ಧ ಬಂಡೆದ್ದು ಉಗ್ರಗಾಮಿಗಳಾಗಿದ್ದಾರೆ.
ಒತ್ತಡದಲ್ಲಿ ಸರ್ಕಾರ : ಟಾಡಾ ಅಡಿ ಬಂಧಿತರಾಗಿರುವ ಆರೋಪಿಗಳನ್ನು ಜೈಲಿನಿಂದ ಹೊರಕ್ಕೆ ಬಿಟ್ಟರೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದಂತೆ. ಅವರು ಮುಂದೆ ಏನೇನು ಮಾಡುವರೋ ಎಂಬ ಆತಂಕ. ಬಿಡದಿದ್ದರೆ ವರನಟ ರಾಜ್ ಬಿಡುಗಡೆ ಸಾಧ್ಯವಿಲ್ಲ. ಈ ವಿಷಯ ತಮಿಳುನಾಡು ಸರ್ಕಾರವನ್ನು ಗೊಂದಲದಲ್ಲಿ ಸಿಲುಕಿಸಿರುವುದಂತೂ ನಿಜ. ಒತ್ತಡದಲ್ಲಿ ಕಾನೂನಿಗೆ ಭಂಗ ತರುವ ನಿರ್ಣಯ ಕೈಗೊಳ್ಳುವ ಸಂದರ್ಭವನ್ನೇ ಕಾಯುತ್ತಿರುವ ಟಿಎಂಸಿ ಮತ್ತು ಎಎಡಿಎಂಕೆ ಪಕ್ಷಗಳು ಸರ್ಕಾರದ ಮೇಲೆ ಗೂಬೆ ಕೂರಿಸಲು ತುದಿಗಾಲಲ್ಲಿ ನಿಂತಿವೆ.
ಒಟ್ಟಿನಲ್ಲಿ ಉಗ್ರರು ಜೈಲಿನಲ್ಲಿ ಇನ್ನೂ ಎಷ್ಟು ಕಾಲ ಇರುತ್ತಾರೋ ರಾಜ್ ಬಿಡುಗಡೆ ಅಷ್ಟೂ ವಿಳಂಬವಾಗಲಿದೆ.
(ಐಎಎನ್ಎಸ್)