ದ.ಒಳನಾಡಿನಲ್ಲಿ ತೀವ್ರಗೊಂಡ ಮುಂಗಾರು
ಬೆಂಗಳೂರು : ಕಳೆದ 24 ಗಂಟೆಗಳ ಅವಧಿಯಲ್ಲಿ ಮುಂಗಾರು ದಕ್ಷಿಣ ಒಳನಾಡಿನಲ್ಲಿ ತೀವ್ರಗೊಂಡಿದೆ. ಕರಾವಳಿ ಪ್ರದೇಶದಲ್ಲಿ ಚುರುಕಾಗಿದೆ. ಮಳೆಯ ಅಟ್ಟಹಾಸ ಮತ್ತೆ ಹೆಚ್ಚಿದೆ. ಮೋಡಗಳ ಸಂಘರ್ಷದಿಂದ ಗುಡುಗಿನ ಆರ್ಭಟವೂ ಮೊರೆಯುತ್ತಿದೆ. ಬಾನಿನಲ್ಲಿ ಕೋಲ್ಮಿಂಚು ಕಾಣಿಸಿಕೊಳ್ಳುತ್ತಿದೆ.
ಉತ್ತರ ಒಳನಾಡಿನ ಕೆಲವೆಡೆಯೂ ಮಳೆ ಆಗಿದೆ. ತೀರ್ಥಹಳ್ಳಿಯಲ್ಲಿ 18, ತಾಳಗುಪ್ಪದಲ್ಲಿ 17, ಕಳಸದಲ್ಲಿ 14, ಕಮ್ಮರಡಿಯಲ್ಲಿ 13 ಸೆಂಟಿ ಮೀಟರ್ಗಳಷ್ಟು ಭಾರಿ ಮಳೆ ಆಗಿದೆ. ಕೆರೆ, ಕಟ್ಟೆ, ಹಳ್ಳ - ಕೊಳ್ಳಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶವೆಲ್ಲಾ ಜಲಾವೃತವಾಗಿದೆ. ಕೊಪ್ಪ, ಶೃಂಗೇರಿಗಳಲ್ಲಿ 11 ಸೆಂಟಿ ಮೀಟರ್, ಸುಬ್ರಹ್ಮಣ್ಯದಲ್ಲಿ 10, ಮಡಿಕೇರಿ, ಸೋಮವಾರಪೇಟೆಗಳಲ್ಲಿ 8 ಸೆಂಟಿ ಮೀಟರ್, ಸಿದ್ದಾಪರದಲ್ಲಿ 7, ಮಂಕಿ, ಬಾಳೆಹೊನ್ನೂರು, ವೀರರಾಜಪೇಟೆಗಳಲ್ಲಿ ತಲಾ 6, ಆನಂದಾಪುರ, ಕುಮಟಾಗಳಲ್ಲಿ 5, ಪೊನ್ನಂಪೇಟೆ ಮತ್ತಿತರ ಕಡೆಗಳಲ್ಲಿ 4 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಮಳೆ ಅಥವಾ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ. ಸ್ಥಳೀಯ ಹವಾಮಾನದಂತೆ ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ಮೋಡ ಮುಸುಕಿದ ವಾತಾವರಣ ಇದ್ದು, ಒಂದೆರಡು ಬಾರಿ ಮಳೆ ಬೀಳುವ ನಿರೀಕ್ಷೆ ಇದೆ.