ಇಂದು ಕೇಂದ್ರ ಹಜ್ ಸಮಿತಿ ವಾರ್ಷಿಕ ಸಭೆ
ನವದೆಹಲಿ : ಕೇಂದ್ರ ಹಜ್ ಸಮಿತಿಯ ವಾರ್ಷಿಕ ಸಭೆಯನ್ನು ರಾಜ್ಯ ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ ಅಜಿತ್ ಕುಮಾರ್ ಪಾಂಜಾ ಮಂಗಳವಾರ ಉದ್ಘಾಟಿಸಲಿದ್ದಾರೆ.
ಎಲ್ಲಾ ರಾಜ್ಯಗಳ ಹಜ್ ಸಮಿತಿ ಅಧ್ಯಕ್ಷರು, 14 ಸಚಿವರು ಹಾಗೂ ಅವರ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಈ ವರ್ಷದ ಹಜ್ ವರದಿ ಕುರಿತು ಚರ್ಚಿಸಲಾಗುವುದು ಎಂದು ಸಮಿತಿಯ ವಕ್ತಾರರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ವರ್ಷದ ಹಜ್ ಯಾತ್ರಿಗಳಿಂದ ಬಂದಿರುವ ದೂರುಗಳನ್ನು ಸಭೆಯಲ್ಲಿ ಕೇಂದ್ರ ಸಮಿತಿಯ ಗಮನಕ್ಕೆ ತರಲಾಗುವುದು. ಇದರಿಂದ ಮುಂದಿನ ವರ್ಷ ಈ ತೊಂದರೆಗಳನ್ನು ನಿವಾರಿಸುವುದರ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ದೆಹಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಏನಿಸ್ ದುರಾನಿ ಹೇಳಿದರು.
ಸೌದಿ ಅರೇಬಿಯಾದ ಭಾರತದ ರಾಯಭಾರಿ ತಲ್ಮಿಜ್ ಅಹ್ಮದ್ ಸಹ ಸಭೆಯಲ್ಲಿ ಭಾಗವಹಿಸಲಿದ್ದು, ಅವರ ಜತೆಯಲ್ಲಿ ಭಾರತದಲ್ಲಿನ ಸೌದಿ ಅರೇಬಿಯಾ ರಾಯಭಾರಿಯೂ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಭೆ ಈ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಡಾ. ರಾಜ್ಕುಮಾರ್ ಅಪಹರಣದಿಂದಾಗಿ ಶಾಂತಿ ಮತ್ತು ಸುವ್ಯವಸ್ಥೆಯಲ್ಲಿ ಏರುಪೇರಾದ ಕಾರಣ ಸಭೆಯನ್ನು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಜೂನ್ ತಿಂಗಳಲ್ಲಿ ಕೇಂದ್ರ ಹಜ್ ಸಮಿತಿಯ ನೂತನ ಅಧ್ಯಕ್ಷರಾಗಿ ತನ್ವೀರ್ ಅಹ್ಮದ್ ಆಯ್ಕೆಯಾದ ನಂತರದ ಮೊದಲ ಹಜ್ ಸಭೆ ಇದಾಗಿದೆ. ಸುಮಾರು 1,18000 ಭಾರತೀಯ ಮುಸ್ಲಿಮರು ಈ ವರ್ಷ ಹಜ್ ಯಾತ್ರೆ ಕೈಗೊಂ-ಡಿ-ದ್ದು, ಇಂಡೋನೇಷಿಯಾ ಬಿಟ್ಟರೆ ಅತಿ ಹೆಚ್ಚು ಮಂದಿ ಭಾರತದವರೇ ಆಗಿದ್ದರು. ಹಜ್ ಯಾತ್ರೆ ಕೈಗೊಂಡ 72 ಸಾವಿರ ಭಾರತೀಯರಿಗೆ ಸಬ್ಸಿಡಿ ದರದಲ್ಲಿ ಏರ್ ಟಿಕೆಟ್ ನೀಡಲಾಗಿದ್ದು, ಇದಕ್ಕಾಗಿ ಸರ್ಕಾರ 110 ಕೋಟಿ ಖರ್ಚು ಮಾಡಿದೆ. ಹಜ್ ಯಾತ್ರೆಗೆ ಈ ರೀತಿ ರಿಯಾಯಿತಿ ದರದಲ್ಲಿ ಏರ್ ಟಿಕೆಟ್ ಸೌಲಭ್ಯ ಕಲ್ಪಿಸುವ ಏಕ ಮಾತ್ರ ರಾಷ್ಟ್ರ ಭಾರತವಾಗಿದೆ.
(ಐಎಎನ್ಎಸ್)