ಹರಿವಿಗೆ ಅರ್ಥ ಹಚ್ಚುವುದು, ಅಣೆಕಟ್ಟೆ ಕಟ್ಟುವುದು...
ನೀವು ಮಳೆಯಲ್ಲಿ ತೋಯ್ದು ಯಾವ ಕಾಲವಾಯಿತು ?
ನೀವು ನಗರದಲ್ಲೇ ಹುಟ್ಟಿ ಕಾಣದೆಮ್ಮೆಯ ಹಾಲು- ಗ್ರೆೃಪ್ ಸಿರಪ್ ಕುಡಿದು ಬೆಳೆದವರಾದರೆ, ಈ ಪ್ರಶ್ನೆ ನಿಮಗಲ್ಲ . ಕ್ಷಮಿಸಿ. ಅಂದಹಾಗೆ, ಮಳೆಯಲ್ಲಿ ತೋಯುವ ಪ್ರಶ್ನೆಯೇ ನಿಮಗೆ ಚೋದ್ಯವಾಗಿ ಕಂಡೀತು. ಮಳೆ ಬಂದಾಗ ಹೊಳೆಯಾಗುವ ಬೀದಿಗಳಲ್ಲಿ ಕಾಜಗದ ದೋಣಿಗಳ ತೇಲಿ ಬಿಡುತ್ತಾ , ಅವು ಪಲ್ಟಿ ಹಾಕುತ್ತಾ ತೇಕುತ್ತಾ , ಕಡೆಗೊಮ್ಮೆ ನೀರ್ಕುಡಿದು ಮಟಮಾಯವಾಗುವ ಬೆರಗು ನಿಮ್ಮಲ್ಲಿದ್ದರೆ- ನೆಂದ ಮಣ್ಣಿನಲ್ಲಿ ಗುಬ್ಬಚ್ಚಿ ಗೂಡು ಕಟ್ಟಿ, ಆದಕ್ಕೆರಡು ಕದಗಳ ಕೊರೆದ ಕಸುಬುಗಾರಿಕೆ ನಿಮ್ಮದಾಗಿದ್ದರೆ- ಮಳೆ ಸುರಿವಿಗೆ ಮಯ್ಯಾಡ್ಡಿ ಅಪ್ಪಾಲೆ ತಿಪ್ಪಾಲೆ ಆಡಿ ಅಮ್ಮನ ಗದ್ದರಿಕೆಗೆ, ಹಿಂದೆಯೇ ಎದೆಯಾಲವಿನ ಬಿಸಿಗೆ ಒಳಗಾದ ರೋಮಾಂಚನ ನಿಮ್ಮ ಬಾಲ್ಯದ ಪುಟಗಳಲ್ಲಿದ್ದರೆ, ಪ್ರಶ್ನೆಯ ಮೌಲ್ಯ ತಟ್ಟನೆ ಎದೆ ಮುಟ್ಟಲು ಸಾಧ್ಯ.
ಬೆಳ್ಳಿಗೆರೆ ಅರಸುತ್ತಾ ನಗರಕ್ಕೆ ಬಂದ ಅನೇಕರಿಗೆ ಈ ಗುಬ್ಬಚ್ಚಿ ಗೂಡುಗಳು ಆಗಾಗ ನೆನಪಾಗುವುದುಂಟು. ಆಕಾಶ ಕವುಚಿ ಎದೆ ಮೇಲೆ ಬಿದ್ದಂತೆ ಸುರಿವ ಜೋರು ಮಳೆ- ಸೂರಿನ ತಗಡಿನ ಷೀಟುಗಳನ್ನು ಲಟ್ಟಿಸುತ್ತಿದ್ದರೆ, ಕಾಲು ಚಾಚಲು ಜಾಗೆಯಿಲ್ಲದ ಕೋಣೆಯಲ್ಲಿ ದೇಹ ಹಿಡಿ ಮಾಡಿಕೊಂಡು ಮುದುಡುತ್ತೇವೆಲ್ಲ - ಆಗ, ನೆನಪಾಗುತ್ತದೆ ಮಣ್ಣಲ್ಲಿ ಕಟ್ಟಿದ ಗುಬ್ಬಚ್ಚಿ ಗೂಡುಗಳು. ಬದುಕಿನ ವೈಚಿತ್ರ್ಯವೇ ಅದು. ಯಾವುದೋ ಬಗೆಯಲ್ಲಿ , ಯಾವಾಗಲೋ ಅಂದುಕೊಂಡದ್ದು ಎದುರಾಗುವುದು. ತಮಾಷೆಗೆ ಅಂದುಕೊಂಡದ್ದೂ.
ಇರುವುದು ಗುಬ್ಬಚ್ಚಿ ಗೂಡಲ್ಲಾದರೂ, ಆಕಾಶದಂಥ ಊರಲ್ಲಿ ಇಸ್ತ್ರಿ ಮಾಡಿಕೊಂಡ ಚಿಕ್ಕಿಗಳಾಗಿ ಬದುಕುತ್ತೇವಲ್ಲ , ಅದಕ್ಕಾಗಿ ಮಳೆಯಲ್ಲಿ ತೋಯುವುದನ್ನು ಮನಸ್ಸು ಒಪ್ಪುವುದೇ ಇಲ್ಲ . ಮೊನ್ನೆ ಮೊನ್ನೆ ತಾನೇ ನಿಯತಕಾಲಿಕದಲ್ಲಿ ಪ್ರಕಟವಾದ ಕತೆಯ ಹುಡುಗಿ ಹೀಗೇನೇ. ಬಾವಿಯಿಂದ ಸಾಗರಕ್ಕೆ ಸೇರುವಾಗ ಬದುಕಿಗಾಗುವಷ್ಟು ಕಟ್ಟಿಕೊಂಡ ನೆನಪುಗಳ ನಿತ್ಯ ನೆಂಚಿಕೊಂಡು ಬದುಕುತ್ತಿರುವಾಗ- ಸುರಿಯುತ್ತದಲ್ಲ ಮಳೆ, ಆಕಾಶ ಭೂಮಿಯನ್ನು ಒಂದಾಗಿಸಿ. ಹುಡುಗಿ ಕೊಡೆ ಬಿಡಿಸುತ್ತಾಳೆ, ಅರಳಿಕೊಳ್ಳುತ್ತವೆ ನೆನಪುಗಳು. ಗುಂಗಲ್ಲಿ ಬಸ್ಸೇರಿ, ಅದೇ ಗುಂಗಲ್ಲಿ ತಾವು ಸೇರಿದ ಎಷ್ಟೋ ಹೊತ್ತಿಗೆ ನೆನಪಾಗುತ್ತದೆ- ಬಸ್ಸಲೇ ಮರೆತು ಬಂದ ಕೊಡೆ. ಹುಚ್ಚು ಲೆಕ್ಕಗಳಲ್ಲಿ ಹುಡುಗಿ ಬಸ್ಸ ಹಾದಿಗುಂಟ ನಡೆಯುತ್ತಾಳೆ. ಕಂಡ ಬಸ್ಸುಗಳಲ್ಲೆಲ್ಲಾ ಕೊಡೆ ಹುಡುಕುತ್ತಾಳೆ. ಪಾಪ ! ಒಂದೇ ದಿನಕ್ಕೆ ಎರಡು ಕೇಜಿ ತೂಕ ಕಳೆದು ಕೊಳ್ಳುತ್ತಾಳೆ.
ಕೊಡೆಯ ನೆನಪಿರುತ್ತದಲ್ಲಾ , ಬಿಟ್ಟೂ ಬಿಟ್ಟೂ ಕಾಡುತ್ತದೆ. ಜೊತೆಯವರೆಲ್ಲ ಮಳೆಯೆಂದು ಮರದಡಿಯೋ, ಅಂಗಡಿ ಮುಂಗಟ್ಟುಗಳ ಮುಂದೆಯೋ ನಡುಗುತ್ತಿದ್ದರೆ- ಜಂಭದಿಂದ ಕೊಡೆ ಬಿಡಿಸಿಕೊಂಡು ನಡೆದದ್ದು, ಮಳೆ- ಬಿಸಿಲು ಏನೊಂದೂ ಇಲ್ಲದಾಗಲೂ ಕೊಡೆ ಬಿಡಿಸಿ ಕನಸು ಕಂಡದ್ದು, ಕೊಡೆಯನ್ನೇ ಜೀವವೆಂದು ಕೊಂಡು ಮಾತುಕತೆ ನಡೆಸಿದ್ದು .. ಎಲ್ಲಾ . ಮತ್ತೆ ಅಂಥದ್ದೇ ಕೊಡೆ ಕೊಂಡುಕೊಳ್ಳುವ ನಿರ್ಣಯದೊಂದಿಗೆ ಆಕೆಯ ವಿಷಾದ ಕಥನಕ್ಕೆ ತೆರೆ ಬೀಳುತ್ತದೆ. ಅದಾದ ನಂತರದ ಎಷ್ಟೋ ದಿನಗಳ ನಂತರದ ಒಂದು ಸಂಜೆ, ಅಂಥಾದ್ದೇ ಒಂದು ಜೋರು ಮಳೆ. ಹುಡುಗಿ ಕಚೇರಿಯಿಂದ ಹೊರಗೆ ಬರುತ್ತಾಳೆ. ಬಿಡಿಸ ಹೋದರೆ ಕೊಡೆಯಿಲ್ಲ . ಮತ್ತೆ ಕೊಡೆ ಕೊಳ್ಳುವ ಸಂದರ್ಭವೇ ಒದಗಿ ಬಂದಿಲ್ಲ . ಹೊದ್ದ ದುಪ್ಪಟವನ್ನೇ ತಲೆಗೆ ಸುತ್ತಿ ತಣ್ಣನೆ ಹೆಜ್ಜೆ ಹಾಕುತ್ತಾಳೆ, ಮನದಲ್ಲಿ ಕೊಡೆ ಹಿಡಿದು. ಕತೆ ಅಲ್ಲಿಗೆ ಮುಗಿಯುತ್ತದೆ.
ನೆನಪುಗಳೇ ಹೀಗೆ, ಹುಚ್ಚು ಹೊಳೆಯಂತೆ. ಹರಿವಿಗೆ ಅರ್ಥ ಹಚ್ಚುವುದು, ಅಣೆಕಟ್ಟು ಕಟ್ಟುವುದು ಕಷ್ಟ . ಹರಿದು ಹೋದಂತೇ ಬಿಡಬೇಕು. ಹೊಸದರ ಸ್ವಾಗತಕ್ಕೆ ಹಳೆಯದು ತೆರವಾಗಲೇಬೇಕಲ್ಲವೇ. ಕೊನೆಯದಾಗಿ, ದಿನದ ಲೆಕ್ಕಿಗನ ಕೆಲಸ ಮುಗಿಸೋಣವೆಂದರೆ ಮತ್ತದೇ ಅಂಕಿ ಅಂಶಗಳ ಪಾಠ. ರಾಜ್ಯದಲ್ಲಿ ಮಳೆ ಚೆನ್ನಾಗಿದೆ ಎಂದರೆ ಈವತ್ತಿಗೆ ಅಷ್ಟು ಸಾಲದೇ?